
ತಿರುವನಂತಪುರ: ದೇವಸ್ಥಾನಗಳ ಜಾತ್ರೆಗಳಲ್ಲಿ ಪಟಾಕಿ, ಸಿಡಿಮದ್ದುಗಳನ್ನು ಸಿಡಿಸುವುದರ ಬಗ್ಗೆ ಚರ್ಚೆ, ಪರಾಮರ್ಶೆ ನಡೆಸುವಂತೆ ಮೊನ್ನೆ ನಡೆದ ಪುಟ್ಟಿಂಗಲ್ ಅಗ್ನಿ ದುರಂತ ಸಂದರ್ಭ ಒದಗಿಸಿದ್ದರೆ, ಇನ್ನೊಂದು ಪ್ರಮುಖ ವಿಷಯ ರಗ್ಗಿನೊಳಗೆ ಧೂಳು ಹಿಡಿದು ಕುಳಿತಿದೆ.
ಕೇರಳದಲ್ಲಿ ದೇವಾಲಯ ಜಾತ್ರೆಗಳಲ್ಲಿ ಅದರಲ್ಲೂ ತ್ರಿಶೂರ್ ಪೂರಂನಲ್ಲಿ ಆನೆಗಳನ್ನು ಬಳಸುವುದನ್ನು ಪ್ರಾಣಿದಯಾ ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ. ಕೇರಳದ ಕುಖ್ಯಾತ ತ್ರಿಶೂರ್ ಪೂರಮ್ ನಲ್ಲಿ ಆನೆಗಳನ್ನು ಬಳಸುತ್ತಾರೆ. ಇವರ ವಾದಕ್ಕೆ ಆಧಾರವೆಂಬಂತೆ ಸಲ್ಲಿ ಕಣ್ಣನ್ ಎಂಬುವವರು ತೆಗೆದ ಭಾವಚಿತ್ರದಲ್ಲಿ ತಿರುವಂಬಾಡಿ ರಾಮಭದ್ರನ್ ಎಂಬ ಆನೆಗೆ ಅವರನ್ನು ನೋಡಿಕೊಳ್ಳುವವರು ವಿಪರೀತ ಹಿಂಸೆ ನೀಡಿರುವ ಗುರುತು ಸಿಕ್ಕಿವೆ.
ವಿಶ್ವಾದ್ಯಂತ ಪ್ರಾಣಿಗಳ ಹಕ್ಕಿನ ಬಗ್ಗೆ ಕೆಲಸ ಮಾಡುವ ಸರ್ಕಾರೇತರ ಸಂಘಟನೆಯಾದ ಔಟ್ರೀಚ್ ಕನ್ಸಲ್ಟೆಂಟ್ ವಿತ್ ಹ್ಯೂಮನ್ ಸೊಸೈಟಿ ಇಂಟರ್ ನ್ಯಾಷನಲ್ ನಲ್ಲಿ ಸಲ್ಲಿ ಕಣ್ಣನ್ ಕೆಲಸ ನಿರ್ವಹಿಸುತ್ತಿದ್ದಾರೆ.
ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ, ''ಹಲವರು ಆನೆಗಳಿಗೆ ಹಿಂಸೆ ಕೊಡುವುದಿಲ್ಲ. ಅವುಗಳನ್ನು ನಮ್ಮ ಮಕ್ಕಳಂತೆಯೇ ಸಾಕಲಾಗುತ್ತದೆ ಎನ್ನುತ್ತಾರೆ. ತ್ರಿಶೂರಿನಲ್ಲಿ ಆನೆಗಳಿಲ್ಲದೆ ಪೂರಂ ನಡೆಯುವುದೇ ಇಲ್ಲ. ರಾಮಭದ್ರನ್ ಗೆ 60ಕ್ಕೂ ಹೆಚ್ಚು ವರ್ಷವಾಗಿದೆ. ಅದನ್ನು 1984ರಲ್ಲಿ ತರಲಾಯಿತು. ಅದರ ಸೊಂಡಿಲು ಕಳೆದ ಏಳು ವರ್ಷಗಳಿಂದ ಪಾರ್ಶ್ವವಾಯುವಿಗೆ ತುತ್ತಾಗಿದೆ, ಹೀಗಿರುವಾಗ ಅದನ್ನು ಧಾರ್ಮಿಕ ಕಾರ್ಯಕ್ಕೆ ಬಳಸುವುದು ಎಷ್ಟು ಸರಿ ಎಂದು ಬರೆದಿದ್ದಾರೆ.
ಆನೆಗಳ ದೇಹದ ಮೇಲಿನ ಗಾಯಗಳನ್ನು ಮರೆಮಾಚಲು ಹೆಚ್ಚಿನ ಸಂದರ್ಭಗಳಲ್ಲಿ ಕಪ್ಪು ಬಣ್ಣ ಮತ್ತು ಬೂದಿ ಬಳಿಯಲಾಗುತ್ತದೆ. ಆನೆಗಳಿಗೆ ಇಷ್ಟೊಂದು ಕ್ರೌರ್ಯ, ಹಿಂಸೆ ನೀಡಿ ಧಾರ್ಮಿಕ ಸಂಪ್ರದಾಯಗಳನ್ನು ಆಚರಿಸುವ ಅಗತ್ಯವಿದೆಯೇ? ಆನೆಗಳು ಕಾಡು ಪ್ರಾಣಿಗಳಾಗಿದ್ದು, ಅವು ತಮ್ಮ ಕುಟುಂಬದ ಜೊತೆಗೆ ಕಾಡಿನಲ್ಲಿಯೇ ವಾಸಿಸಬೇಕು.ಮನುಷ್ಯರ ಕೈಯಲ್ಲಿ ಸಿಕ್ಕಿ ಇಂತಹ ಕ್ರೂರ ರೀತಿಯಲ್ಲಿ ಹಿಂಸೆಗೊಳಗಾಗಬಾರದು ಎಂದು ಸಲ್ಲಿ ಕಣ್ಣನ್ ಬರೆದುಕೊಂಡಿದ್ದಾರೆ.
Advertisement