ನವದೆಹಲಿ: ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣ ಸೋಮವಾರ ಸಂಸತ್ತಿನಲ್ಲೂ ಪ್ರತಿಧ್ವನಿಸಿದ್ದು, ಬಿಜೆಪಿ ಅಫಿಡವಿಟ್ ವಿವಾದವನ್ನು ಪ್ರಸ್ತಾಪಿಸುವ ಮೂಲಕ ವಿಷಯಾಂತರ ಮಾಡು ಯತ್ನ ಮಾಡುತ್ತಿದೆ ಎಂದು ಕೇಂದ್ರ ಮಾಜಿ ಗೃಹ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಈ ಕುರಿತು ಇಂದು ಸರಣಿ ಟ್ವೀಟ್ ಮಾಡಿರುವ ಚಿದಂಬರಂ, ಅಫಿಡವಿಟ್ ಗಳಿಗೆಲ್ಲ ಗೃಹ ಸಚಿವರು ಸಹಿ ಮಾಡುವುದಿಲ್ಲ. ಅದನ್ನು ಅಧೀನ ಕಾರ್ಯದರ್ಶಿಗಳು ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
2004ರ ಜೂನ್ 15ರಂದು ಇಶ್ರತ್ ಜಹಾನ್, ಜಾವೇದ್ ಶೇಖ್ ಅಲಿಯಾಸ್ ಪ್ರಾಣೇಶ್ ಪಿಳ್ಳೈ ಹಾಗೂ ಇಬ್ಬರು ಪಾಕಿಸ್ತಾನಿಗಳಾದ ಅಮ್ಜದ್ ಅಲಿ ಹಾಗೂ ಜಿಶಾನ್ ಜೋಹಾರ್ ಅಬ್ದುಲ್ ಘನಿ ಅವರು ಪೊಲೀಸ್ ಎನ್ ಕೌಂಟರ್ ಗೆ ಬಲಿಯಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿಎ ಸರ್ಕಾರ ಎರಡು ಅಫಿಡವಿಟ್ ಗಳನ್ನು ಸಲ್ಲಿಸಿತ್ತು. ಮೊದಲ ಅಫಿಡವಿಟ್ ನಲ್ಲಿ ಇಶ್ರತ್ ಜಹಾನ್ ಸೇರಿದಂತೆ ನಾಲ್ವರನ್ನು ನಕಲಿ ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗಿತ್ತು. ಇನ್ನು ಎರಡನೇ ಅಫಿಡವಿಟ್ ನಲ್ಲಿ ಅವರು ಉಗ್ರರು ಎನ್ನುವುದಕ್ಕೆ ಯಾವುದೇ ಪ್ರಬಲ ಸಾಕ್ಷ್ಯಗಳಿಲ್ಲ ಎಂದು ಹೇಳಲಾಗಿತ್ತು. ಅಲ್ಲದೆ ಈ ಎರಡೂ ಅಫಿಡವಿಟ್ ಗಳಿಗೆ ಚಿದಂಬರಂ ಸಹಿ ಹಾಕಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದವು.