ಚಂಡೀಗಢ: ಜಲಂಧರ್ ನಲ್ಲಿ ಆರ್ ಎಸ್ ಎಸ್ ನ ಮುಖಂಡ ಜಗದೀಶ್ ಗಗನೇಜಾ ಅವರ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣದ ತನಿಖೆಯನ್ನು ನಡೆಸಲು ಪಂಜಾಬ್ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ.
ಭಾರತೀಯ ಸೇನೆಯ ಮಾಜಿ ಅಧಿಕಾರಿಯೂ ಆಗಿರುವ ಜಗದೀಶ್ ಗಗನೇಜಾ ಅವರ ಮೇಲೆ ಜಲಂಧರ್ ನಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಶಸ್ತ್ರ ಚಿಕಿತ್ಸೆ ನಡೆಸಿ ದೇಹಕ್ಕೆ ಹೊಕ್ಕಿದ್ದ ಎರಡು ಗುಂಡುಗಳನ್ನು ಹೊರತೆಗೆಯಲಾಗಿದ್ದು, ಜಗದೀಶ್ ಗಗನೇಜಾ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಗದೀಶ್ ಗಗನೇಜಾ ಅವರು ತಮ್ಮ ಪತ್ನಿಯೊಂದಿಗೆ ಕಾರಿನಲ್ಲಿ ತೆರಳುತ್ತಿರಬೇಕಾದರೆ ಮುಸುಕುಧಾರಿಗಳಿಬ್ಬರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಆರ್ ಎಸ್ ಎಸ್ ನ ಮುಖಂಡರ ಮೇಲೆ ನಡೆದಿರುವ ದಾಳಿಯನ್ನು ಖಂಡಿಸಿರುವ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಪ್ರಕರಣದ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸುವಂತೆ ಸೂಚಿಸಲಾಗಿದೆ.
Advertisement