ನವದೆಹಲಿ: ಐತಿಹಾಸಿಕ ಸರಕು ಮತ್ತು ಸೇವಾ ಮಸೂದೆ ಲೋಕಸಭೆಯಲ್ಲಿ ನಿನ್ನೆ (ಸೋಮವಾರ) ಅಂಗೀಕಾರಗೊಂಡ ಖುಷಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರೋಧ ಪಕ್ಷದ ಸದಸ್ಯರಿಗೆ ಮಂಗಳವಾರ ಸದನದಲ್ಲಿ ಕೃತಜ್ಞತೆ ಸಲ್ಲಿಸಿದರು.
ಅವರು ಇಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಬಳಿಗೆ ತೆರಳಿ ಕೈ ಕುಲುಕಿ, ಮಸೂದೆ ಅಂಗೀಕಾರಗೊಳ್ಳುವಲ್ಲಿ ವಿರೋಧ ಪಕ್ಷಗಳು ಸಹಕರಿಸಿದ್ದಕ್ಕೆ ಧನ್ಯವಾದ ಹೇಳಿದರು. ಅಲ್ಲದೆ ಅವರೊಂದಿಗೆ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು.
ಆದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಸದನದಲ್ಲಿ ಹಾಜರಿರಲಿಲ್ಲ.
ನಂತರ ಪ್ರಧಾನಿಯವರು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿಯವರೆಡೆಗೆ ಸಾರಿ ಉಭಯ ಕುಶಲೋಪರಿ ನಡೆಸಿ ಸಂತಸ ಹಂಚಿಕೊಂಡರು. ನಂತರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೆಡೆಗೆ ಸಾಗಿ ಕೈ ಕುಲುಕಿದರು.
ಪ್ರಧಾನಿಯವರ ಸುತ್ತ ಇತರ ಲೋಕಸಭಾ ಸದಸ್ಯರು, ಮೈತ್ರಿ ಪಕ್ಷದವರು ಮತ್ತು ವಿರೋಧ ಪಕ್ಷಗಳ ಸದಸ್ಯರು ಸುತ್ತುವರಿದಿದ್ದರು.
ಜಿಎಸ್ ಟಿ ಮಸೂದೆ ಅಂಗೀಕಾರವಾದದ್ದಕ್ಕೆ ಮಹಾರಾಷ್ಟ್ರದ ಶಿವಸೇನೆ, ಶಿರೋಮಣಿ ಅಕಾಲಿದಳ, ಟಿಎಂಸಿ, ಬಿಜೆಡಿ ಮತ್ತು ಎಐಯುಡಿಎಫ್ ಸದಸ್ಯರು ಕೂಡ ಪ್ರಧಾನಿ ಬಳಿ ಸಾಗಿ ಅಭಿನಂದನೆ ಹೇಳಿದರು.