ಆರ್ ಎಸ್ಎಸ್ ಚಿಂತಕ ರಾಕೇಶ್ ಸಿನ್ಹಾ(ಸಂಗ್ರಹ ಚಿತ್ರ)
ಆರ್ ಎಸ್ಎಸ್ ಚಿಂತಕ ರಾಕೇಶ್ ಸಿನ್ಹಾ(ಸಂಗ್ರಹ ಚಿತ್ರ)

ದಲಿತರ ಮೇಲೆ ಹಲ್ಲೆ ಮಾಡುವವರು ದೇಶ ವಿರೋಧಿಗಳು: ಆರ್ ಎಸ್ಎಸ್

ದಲಿತರ ವಿರುದ್ಧ ಗೋ ರಕ್ಷಕರು ದೌರ್ಜನ್ಯ ನಡೆಸಿರುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಖಂಡಿಸಿರುವ ಬೆನ್ನಲ್ಲೇ...
Published on
ನವದೆಹಲಿ: ದಲಿತರ ವಿರುದ್ಧ ಗೋ ರಕ್ಷಕರು ದೌರ್ಜನ್ಯ ನಡೆಸಿರುವುದನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಖಂಡಿಸಿರುವ ಬೆನ್ನಲ್ಲೇ, ಆರ್ಎಸ್ಎಸ್ ಚಿಂತಕ ರಾಕೇಶ್ ಸಿನ್ಹಾ ಮಾತನಾಡಿ, ದಲಿತ ಸಮುದಾಯದವರನ್ನು ಒಗ್ಗೂಡಿಸಿ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಬಲ ಪಂಥೀಯ ಹಿಂದೂ ರಾಷ್ಟ್ರೀಯವಾದಿ ಗುಂಪುಗಳು ಉತ್ತಮ ಸೇವೆ ಮಾಡುತ್ತಿವೆ ಎಂದು ಹೇಳಿದ್ದಾರೆ. ಅಲ್ಲದೆ ದಲಿತರ ಮೇಲೆ ಹಲ್ಲೆ ನಡೆಸುವವರು ದೇಶ ವಿರೋಧಿಗಳು ಎಂದು ಪ್ರಧಾನಿ ಮಾತಿಗೆ ದನಿಗೂಡಿಸಿದ್ದಾರೆ.
ನಮ್ಮ ದೇಶದಲ್ಲಿ ದಲಿತರ ವಿರುದ್ಧ ದೌರ್ಜನ್ಯ ನಡೆಸುವವರಿಗೆ ಪ್ರಧಾನಿಯವರು ಸರಿಯಾದ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಗೃತಿ, ಸಮಾಜ ಸೇವೆ ಮೂಲಕ ದಲಿತರನ್ನು ನಮ್ಮ ಸಮಾಜದ ಮುಖ್ಯ ವಾಹಿನಿಗೆ ತಂದು ಅವರನ್ನು ಒಗ್ಗೂಡಿಸಲು ಆರ್ ಎಸ್ಎಸ್ ನಿರತವಾಗಿದೆ ಎಂದು ಸಿನ್ಹ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದರು.
ಗುಜರಾತ್ ನ ಗಿರ್ ಸೋಮನಾಥ್ ಜಿಲ್ಲೆಯ ಉನಾದಲ್ಲಿ ದಲಿತ ಯುವಕರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಮಾತನಾಡಿದ ಸಿನ್ಹಾ, ಘಟನೆ ನಡೆದ ಬಳಿಕ ಆರ್ ಎಸ್ಎಸ್ ಮೊದಲಿಗೆ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಎಂದು ಪ್ರತಿಪಾದಿಸಿದರು.
''ಆರ್ ಎಸ್ಎಸ್ ನಾಯಕರು ಉನಾಕ್ಕೆ ಭೇಟಿ ನೀಡಿದ್ದರು. ಆಗಸ್ಟ್ 3ರಂದು ಉನಾದಲ್ಲಿ ಆರ್ಎಸ್ಎಸ್ ದೊಡ್ಡ ಸಮ್ಮೇಳನವನ್ನು ಮಾಡಿತ್ತು. ದಲಿತರ ವಿರುದ್ಧ ಹಿಂಸೆ ಮಾಡಿದವರು ದೇಶದ ಹಿಂದುತ್ವಕ್ಕೆ ಯಾವುದೇ ಸೇವೆ ಸಲ್ಲಿಸಲು ಸಾಧ್ಯವಿಲ್ಲ ಎಂದರು.ದಲಿತರ ಮೇಲೆ ಹಲ್ಲೆ ಮಾಡುವವರು ದೇಶದ ರಾಷ್ಟ್ರೀಯತೆಗೆ ಧಕ್ಕೆ ತರುತ್ತಾರೆ ಎಂದರು.
ಗೋವುಗಳನ್ನು ರಕ್ಷಿಸುವುದು ತಮ್ಮ ಧಾರ್ಮಿಕ, ನೈತಿಕ, ಪ್ರಜಾಸತ್ತಾತ್ಮಕ ಕರ್ತವ್ಯ ಎಂದು ಪ್ರತಿಯೊಬ್ಬ ನಾಗರಿಕರು ಅರ್ಥ ಮಾಡಿಕೊಳ್ಳಬೇಕು. ಗೋವುಗಳನ್ನು ಕೊಲ್ಲುವುದನ್ನು ತಡೆಗಟ್ಟುವಲ್ಲಿ ರಾಜ್ಯ ಸರ್ಕಾರಗಳು ಯಾವುದೇ ನೈತಿಕ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.
ನಮ್ಮ ದೇಶದಲ್ಲಿ ಸುಮಾರು 30 ಸಾವಿರ ಅಕ್ರಮ ಗೋವು ಕಸಾನೆ ಮನೆಗಳಿವೆ. ಗೋ ಸಂಹಾರದ ವಿರುದ್ಧ ಆರ್ಎಸ್ಎಸ್ ನಡೆಸುತ್ತಿರುವ ಗೋ ಸಂಹಾರ ವಿರೋಧಿ ಜಾಗೃತಿ ಒಂದು ಪ್ರಜಾಸತ್ತಾತ್ಮಕ, ಅಹಿಂಸೆಯ ಚಳವಳಿಯಾಗಬೇಕು ಎಂದು ರಾಕೇಶ್ ಸಿನ್ಹಾ ಅಭಿಪ್ರಾಯಪಟ್ಟರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com