ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನಕಲಿ ಗೋರಕ್ಷಕರ ಬಗ್ಗೆ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ, ಹರ್ಯಾಣ ಸರ್ಕಾರ ನಕಲಿ ಗೋರಕ್ಷಕರನ್ನು ಪತ್ತೆ ಮಾಡಲು ಹೊಸ ಯೋಜನೆಯೊಂದನ್ನು ರೂಪಿಸಿದೆ.
ಗೋವುಗಳನ್ನು ರಕ್ಷಿಸುವ ಅಸಲಿ ಗೋರಕ್ಷಕರನ್ನು ಗುರುತಿಸಲು ಹರ್ಯಾಣ ಗೋ ಆಯೋಗದಿಂದ ಗುರುತಿನ ಚೀಟಿ ನೀಡುವುದು ಹರ್ಯಾಣ ಸರ್ಕಾರದ ಹೊಸ ಯೋಜನೆಯಾಗಿದೆ. ಕೆಲವು ಕ್ರಿಮಿನಲ್ ಗಳು ಗೋರಕ್ಷಕರ ಸೋಗಿನಲ್ಲಿದ್ದಾರೆ ಇಂತವರನ್ನು ಕಂಡುಹಿಡಿಯಲು ಅಸಲಿ ಗೋರಕ್ಷಕರಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ಹರ್ಯಾಣ ಗೋ ಆಯೋಗದ ಮುಖ್ಯಸ್ಥ ಹಾಗೂ ಆರ್ ಎಸ್ ಎಸ್ ನ ಮುಖಂಡ ಬಾನಿ ರಾಮ್ ಮಂಗಲ್ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಗೋರಕ್ಷಕರಲ್ಲಿ ಬಹುತೇಕರು ಸಮಾಜಘಾತುಕ ಶಕ್ತಿಗಳು, ಅಂತಹ ಸ್ವಯಂ ಘೋಷಿತ ಗೋ ರಕ್ಷಕರು ತಮ್ಮ ತಪ್ಪುಗಳನ್ನು ಮುಚ್ಚಿಡಲು ಗೋರಕ್ಷಣೆಯ ಸೋಗು ಹಾಕುತ್ತಾರೆ ಎಂದು ಹೇಳಿದ್ದರು. ಹರ್ಯಾಣ ಪೊಲೀಸರು ನಕಲಿ ಗೋರಕ್ಷಕರ ಜಾಲದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ನಕಲಿ ಗೋ ರಕ್ಷಕರ ಜಾಲ, ಗೋವು ಅಥವಾ ಇನ್ನಿತರ ಪ್ರಾಣಿಗಳನ್ನು ಸಾಗಿಸುತ್ತಿದ್ದ ವಾಹನಗಳಿಂದ 8,000 ರೂಪಾಯಿಗಳನ್ನು ವಸೂಲಿ ಮಾಡುತ್ತಿದ್ದ ಮಾಹಿತಿ ಬಹಿರಂಗವಾಗಿತ್ತು.
Advertisement