ಮುಂಬೈ: ಕಳೆದ ಎಂಟು ದಿನಗಳ ತೀವ್ರ ಹುಡುಕಾಟದ ನಂತರ ಮಹದ್ ನ ಸಾವಿತ್ರಿ ನದಿಯ ಸೇತುವೆ ಕುಸಿದು ಮುಳುಗಿ ಹೋಗಿದ್ದ ಬಸ್ಸುಗಳು ಅವಶೇಷಗಳು ಪತ್ತೆಯಾಗಿವೆ. ಸುದೀರ್ಘ ಹುಡುಕಾಟದ ನಂತರ ನೌಕಾಪಡೆ ತಂಡದವರು ಬಸ್ಸಿನ ಬಿಡಿಭಾಗಗಳನ್ನು ಪತ್ತೆಹಚ್ಚಿದ್ದಾರೆ.
ಸೇತುವೆ ಕುಸಿದ 170ರಿಂದ 200 ಮೀಟರ್ ದೂರದಲ್ಲಿ ಬಸ್ಸಿನ ಬಿಡಿ ಭಾಗಗಳು ಪತ್ತೆಯಾಗಿವೆ. ಪತ್ತೆಯಾದ ಬಸ್ಸಿನ ಭಾಗಗಳು ಒಂದು ಬಸ್ಸಿನದ್ದೇ ಅಥವಾ ಎರಡರದ್ದೇ ಎಂದು ತಿಳಿದುಬಂದಿಲ್ಲ.
ನದಿಯಲ್ಲಿ ಪರಿಸ್ಥಿತಿ ಕಠಿಣವಾಗಿದ್ದರೂ, ತೀವ್ರ ಅಲೆಯಿದ್ದರೂ, ಮೊಸಳೆಗಳಿದ್ದರೂ ಕೂಡ ನೌಕಾ ಪಡೆ ತಂಡ ಸ್ಪಾಟ್ ಡೈವಿಂಗ್ ನಡೆಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಕ್ರೇನ್ ಬಳಸಿ ಭಗ್ನಾವಶೇಷಗಳ ಹುಡುಕಾಟ ನಡೆಸಿತು. ಈ ಸಂದರ್ಭದಲ್ಲಿ ಬಸ್ಸಿನ ಬಿಡಿ ಭಾಗಗಳು ಸಿಕ್ಕಿವೆ. ಡೈವಿಂಗ್ ನಲ್ಲಿ ವಿಶೇಷ ಪರಿಣತಿ ಪಡೆದ ಭಾರತೀಯ ನೌಕಾಪಡೆಯ ಸಿಬ್ಬಂದಿಗಳ ತಂಡ ಹುಡುಕಾಟದಲ್ಲಿ ನಿರತವಾಗಿದೆ.
ಸೇತುವೆ ಕುಸಿತದಲ್ಲಿ ಕಣ್ಮರೆಯಾದವರ ಹುಡುಕಾಟ ನಡೆಸುವಂತೆ ಮಹಾರಾಷ್ಟ್ರ ಸರ್ಕಾರ ಭಾರತೀಯ ನೌಕಾಪಡೆಯನ್ನು ಕೋರಿತ್ತು.
ಇದುವರೆಗೆ 26 ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ಒಟ್ಟು 41 ಮಂದಿ ಕಣ್ಮರೆಯಾಗಿದ್ದಾರೆ. ದುರ್ಘಟನೆಯಲ್ಲಿ ಎರಡು ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಮತ್ತು ಎರಡು ಖಾಸಗಿ ಕಾರುಗಳು ಮತ್ತ 38 ಪ್ರಯಾಣಿಕರು ಸಾವಿತ್ರಿ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದರು.