ನಾಗ್ಪುರ: ಗೋರಕ್ಷಣೆಯ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿಪ್ರಾಯವನ್ನು ಆರ್ ಎಸ್ ಎಸ್ ನ ಹಿರಿಯ ನಾಯಕ ಎಂಜಿ ವೈದ್ಯ ಸಮರ್ಥಿಸಿಕೊಂಡಿದ್ದಾರೆ.
ನಕಲಿ ಗೋ ರಕ್ಷಕರ ವಿಷಯದಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಎಂ ಜಿ ವೈದ್ಯ, ಗೋರಕ್ಷಣೆಯ ಹೆಸರಿನಲ್ಲಿ ತಪ್ಪುಗಳು ನಡೆಯುತ್ತಿಲ್ಲ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಗುಜರಾತ್ ನಲ್ಲಿ ನಡೆದಿರುವ ದಾಳಿಯ ಮಾದರಿಯನ್ನು ಯಾವುದೇ ಕಾನೂನು ಸಹ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯ ತಿಳಿಸಿದ್ದಾರೆ.
ಕಾನೂನನ್ನು ಕೈಗೆ ತೆಗೆದುಕೊಂಡು ಯಾರು ಬೇಕಾದರೂ ಪೊಲೀಸರಾಗಲು ಹೊರಟಿರುವುದು ಸರಿಯಲ್ಲ, ಅಭಿಪ್ರಾಯಗಳನ್ನು ತಿಳಿಸಲು ಪ್ರತಿಯೊಬ್ಬರಿಗೂ ಅಧಿಕಾರವಿದೆ. ಅಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಶೇ.80 ರಷ್ಟು ಗೋ ರಕ್ಷಕರು ನಕಲಿ ಎಂದು ಹೇಳಿದ್ದರು. ಅಂಕಿ-ಸಂಖ್ಯೆಗಳಲ್ಲಿ ವ್ಯತ್ಯಾಸವಿರಬಹುದಾದರೂ ಎಲ್ಲಾ ಗೋ ರಕ್ಷಕರು ಸಮಾಜಕ್ಕೆ ಒಳಿತನ್ನೇ ಮಾಡುತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಎಂ ಜಿ ವೈದ್ಯ ತಿಳಿಸಿದ್ದಾರೆ. ಪ್ರಧಾನಿ ಹೇಳಿಕೆಗೆ ಸಹಜವಾಗಿಯೇ ಆಕ್ರೋಶ ವ್ಯಕ್ತವಾಗಿದೆ. ಶೇ.80 ರಷ್ಟು ಗೋರಕ್ಷಕರು ನಕಲಿ ಎಂದಿದ್ದಕ್ಕೆ ಪ್ರಧಾನಿ ಮೋದಿ ಗೋ ರಕ್ಷಣೆಯ ವಿರುದ್ಧವಾಗಿದ್ದಾರೆ ಎಂಬ ಭಾವನೆ ವ್ಯಕ್ತವಾಗಿದೆ ಎಂದು ಎಂ ಜಿ ವೈದ್ಯ ತಿಳಿಸಿದ್ದಾರೆ.
Advertisement