ಶ್ರೀನಗರ: ಜುಲೈ 2ರಂದು ಆರಂಭಗೊಂಡಿದ್ದ 48 ದಿನಗಳ ವಾರ್ಷಿಕ ಪವಿತ್ರ ಅಮರನಾಥ ಯಾತ್ರೆ ಗುರುವಾರ ವಿಶೇಷ ಪೂಜೆಯೊಂದಿಗೆ ಶಾಂತಿಯುತವಾಗಿ ಅಂತ್ಯಗೊಂಡಿದೆ.
ಶಿವನ ಹಿಮಲಿಂಗಕ್ಕೆ ಸಾಂಪ್ರದಾಯಿಕ ಪೂಜೆ ನೆರವೇರಿಸುವ ಮೂಲಕ ಈ ವರ್ಷದ ಅಮರನಾಥ ಯಾತ್ರೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಶ್ರೀ ಅಮರನಾಥ್ ದೇವಾಲಯದ ಆಡಳಿತ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಮರನಾಥ ಗುಹೆ ಉತ್ತರ ಕಾಶ್ಮೀರದಲ್ಲಿರುವ ಅನಂತನಾಗ್ ಜಿಲ್ಲೆಯಲ್ಲಿದ್ದು, ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 140 ಕಿ.ಮೀ. ದೂರದಲ್ಲಿದೆ. ಸಮುದ್ರ ಮಟ್ಟದಿಂದ 13000 ಅಡಿ ಎತ್ತರದಲ್ಲಿದೆ. ಇದು ಭಾರತದ ಅತೀ ದೊಡ್ಡ ಗುಹೆಯಾಗಿದ್ದು 130 ಅಡಿ ವ್ಯಾಸವನ್ನು ಹೊಂದಿದೆ.
ಅಮರನಾಥ ಯಾತ್ರೆಯು ಪ್ರತಿ ವರ್ಷ ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ನಡೆಯುತ್ತದೆ. ಅಮರನಾಥ ಗುಹೆಯನ್ನು ತಲುಪಲು ಚಂದನವಾರಿ ಅಥವಾ ಬಲ್ಟಾಲ್ನಿಂದ ಚಾರಣ, ಕುದುರೆ ಅಥವಾ ಹೆಲಿಕಾಪ್ಟರ್ನಲ್ಲೇ ಸಾಗಬೇಕು.