ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನದಲ್ಲಿರುವ ಆಡಳಿತರೂಢ ಪಿಡಿಪಿ ಶಾಸಕ ಮೊಹಮ್ಮದ್ ಯೂಸಫ್ ಭಟ್ ಅವರ ಮನೆ ಮೇಲೆ ಗುರುವಾರ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಟ್ ಅವರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಮುಖ್ಯ ಸಚೇತಕರಾಗಿದ್ದು, ದುಷ್ಕರ್ಮಿಗಳು ದಾಳಿ ನಡೆಸಿದ ವೇಳೆ ಅವರು ಮತ್ತು ಅವರ ಕುಟುಂಬ ಮನೆಯಲ್ಲಿರಲಿಲ್ಲ.
ಕಳೆದ ರಾತ್ರಿ ಯುವಕನಿಗಾಗಿ ಪೊಲೀಸರು ಮೀಮಂದರ್ ನಲ್ಲಿ ಹಲವು ಮನೆಗಳ ಮೇಲೆ ದಾಳಿ ನಡೆಸಿದ ನಂತರ ಭಾರೀ ಸಂಖ್ಯೆಯ ಗುಂಪೊಂದು ಪಿಡಿಪಿ ಶಾಸಕರ ಮನೆ ಮೇಲೆ ದಾಳಿ ನಡೆಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಟ್ ಮನೆ ಮೇಲೆ ದಾಳಿ ನಡೆಸಿದ ಗುಂಪು, ಶಾಸಕರ ಮನೆ ಗಾರ್ಡ್ ರೂಂ ಹಾಗೂ ಅಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನು ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜುಲೈ 8ರಂದು ನಡೆದ ಎನ್ ಕೌಂಟರ್ ನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರಾನ್ ವನಿ ಹತ್ಯೆ ಮಾಡಿದ ನಂತರ ಕಾಶ್ಮೀರ ಹೊತ್ತಿ ಉರಿಯುತ್ತಿದೆ.