ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಇತಿಹಾಸವನ್ನು ಮತ್ತೆ ಬರೆದಿದ್ದಾರೆ ಎಂದು ಕಾಣುತ್ತದೆ.
ಕೇಂದ್ರ ಸರ್ಕಾರದ ತಿರಂಗ ಯಾತ್ರೆ ರ್ಯಾಲಿ ಅಂಗವಾಗಿ ಮಧ್ಯ ಪ್ರದೇಶದ ಚ್ಚಿಂದ್ ವಾರಾದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ಮಾಜಿ ಪ್ರಧಾನ ಮಂತ್ರಿ ದಿವಂಗತ ಜವಹರಲಾಲ ನೆಹರೂ ಮತ್ತು ಮಾಜಿ ಗೃಹ ಸಚಿವ ದಿವಂಗತ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಶಹೀದ್ ಎಂದು ಕರೆದು ಮುಜುಗರಕ್ಕೀಡಾಗುವ ಪ್ರಸಂಗ ಎದುರಾಯಿತು.
ಅವರು ತಮ್ಮ ಭಾಷಣದಲ್ಲಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ನೆಹರೂ, ಪಟೇಲ್, ಸುಭಾಷ್ ಚಂದ್ರ ಬೋಸ್ ಮೊದಲಾದವರನ್ನು ಬ್ರಿಟಿಷರು ನೇಣಿಗೇರಿಸಿದರು ಎಂದು ಹೇಳುವ ಮೂಲಕ ಅಲ್ಲಿ ಸೇರಿದ್ದ ಜನರನ್ನು ತಬ್ಬಿಬ್ಬು ಮಾಡಿದರು.
ಜಾವಡೇಕರ್ ತಪ್ಪಾಗಿ ಮಾತನಾಡಿದ್ದು ಸ್ಪಷ್ಟ. ಏಕೆಂದರೆ ನೆಹರೂ ತೀರಿಕೊಂಡಿದ್ದು 1964ರಲ್ಲಿ ಸಹಜ ಖಾಯಿಲೆಯಿಂದಾದರೆ, ಸರ್ದಾರ್ ಪಟೇಲ್ ಮೃತಪಟ್ಟಿದ್ದು 1950ರಲ್ಲಿ. ಇನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಸಾವು ಇಂದಿಗೂ ರಹಸ್ಯವಾಗಿ ಉಳಿದಿದೆ.