ನವದೆಹಲಿ: ಬಾಡಿಗೆ ತಾಯಂದಿರ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಕಾನೂನಿನ ಕರಡನ್ನು ಅಂಗೀಕರಿಸಿದ್ದು, ಇನ್ನು ಮುಂದಿನ ದಿನಗಳಲ್ಲಿ ವಾಣಿಜ್ಯ ಬಾಡಿಗೆ ತಾಯ್ತನಕ್ಕೆ ಕಡಿವಾಣ ಹಾಕಿದೆ.
ಕೇಂದ್ರ ಸಚಿವ ಸಚಿವ ಸಂಪುಟ ಅಂಗೀಕರಿಸಿರುವ ಹೊಸ ಕಾನೂನಿನ ಪ್ರಕಾರ, ಇನ್ನು ಮುಂದಿನ ದಿನಗಳಲ್ಲಿ ಬಾಡಿಗೆ ತಾಯ್ತನಕ್ಕೆ ಸಂಪೂರ್ಣ ಕಡಿವಾಣ ಬೀಳಲಿದೆ. ಒಂದು ವೇಳೆ ಬಂಜೆತನ ಕಾಡಿದರೆ ಮಾತ್ರ ಬಾಡಿಗೆ ತಾಯಿಯ ಮೂಲಕ ಮಗು ಪಡೆಯಬಹುದಾಗಿದೆ. ಆದರೆ ಅದಕ್ಕೂ ಕೆಲವೊಂದು ನಿಯಮಗಳನ್ನು ಅನುಸರಿಸಬೇಕಿದ್ದು, ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವ ದಂಪತಿಗಳು ತಮ್ಮ ಹತ್ತಿರದ ಸಂಬಂಧಿಕರನ್ನು ಮಾತ್ರ ಬಾಡಿಗೆ ತಾಯಿಯನ್ನಾಗಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅಂತೆಯೇ ಮಗು ಪಡೆಯುವ ದಂಪತಿಗಳು ವೈದ್ಯಕೀಯ ಖರ್ಚು ವೆಚ್ಚಗಳನ್ನು ಮಾತ್ರ ಭರಿಸಬೇಕಾಗುತ್ತದೆ.
ಕೇಂದ್ರ ಸಚಿವ ಸಂಪುಟ ಅಂಗೀಕರಿಸಿರುವ ಕರಡು ಮಸೂದೆಯಲ್ಲಿ ಹತ್ತಿರದ ಸಂಬಂಧಿಕರಿಂದ ಮಾತ್ರ ಮಗು ಪಡೆಯಬಹುದು ಎಂದು ಹೇಳಲಾಗಿದೆಯಾದರೂ, ಹತ್ತಿರದ ಸಂಬಂಧಿಕರು ಯಾರು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖ ಮಾಡಿಲ್ಲ. ಇನ್ನು ವಿದೇಶಿ ಬಾಡಿಗೆ ತಾಯಂದರಿಂದ ಮಗು ಪಡೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಬಾಡಿಗೆ ತಾಯಂದಿರ ಪ್ರಕರಣಗಳನ್ನು ನಿರ್ವಹಣೆ ಮಾಡುವುದಕ್ಕಾಗಿಯೇ ಕೇಂದ್ರ ಸರ್ಕಾರ ರಾಷ್ಟ್ರೀಯ ಬಾಡಿಗೆ ತಾಯ್ತನ ಮಂಡಳಿ ಸ್ಥಾಪನೆ ಮಾಡಲಿದೆ ಎಂದು ಸುಷ್ಮಾ ಸ್ವರಾಜ್ ಮಾಹಿತಿ ನೀಡಿದ್ದಾರೆ.
ಕರಡು ಮಸೂದೆಯಲ್ಲಿ ಸಿಂಗಲ್ ಪೇರೆಂಟ್, ಅವಿವಾಹಿತರು, ಸಲಿಂಗಿಗಳಿಗೆ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು.ಬಾಡಿಗೆ ತಾಯಂದಿರ ಮೂಲಕ ಮಗು ಪಡೆಯಬೇಕಾದರೆ ಆ ದಂಪತಿಗಳು ವಿವಾಹವಾಗಿ ಕನಿಷ್ಠ 5 ವರ್ಷಗಳಾಗಿರಬೇಕೆಂಬ ನಿಯಮವನ್ನು ವಿಧಿಸಲಾಗಿದೆ. ಕೇಂದ್ರ ಸಚಿವ ಸಂಪುಟ ಅಂಗೀಕರಿಸಿರುವ ಕರಡು ಮಸೂದೆ ಸಂಸತ್ ನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ.
Advertisement