ನವದೆಹಲಿ: ದೇಶದಲ್ಲಿ ತೀವ್ರ ಸಂಚಲನ ಮೂಡಿಸಿದ್ದ 2008ರಲ್ಲಿ ನಡೆದ ಆರುಷಿ-ಹೇಮರಾಜ್ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧ ಜೈಲು ಪಾಲಾಗಿರುವ ಆರುಷಿ ತಾಯಿ ನೂಪುರ್ ತಲ್ವಾರ್ ಗೆ ಅಲಹಬಾದ್ ಹೈಕೋರ್ಟ್ ಸೋಮವಾರ ಮೂರು ವಾರಗಳ ಕಾಲ ಪೆರೋಲ್ ನೀಡಿದೆ.
ತಮ್ಮ ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಪೆರೋಲ್ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಅಪರಾಧಿಗೆ ತಾಯಿ ಭೇಟಿ ಮಾಡುವುದಕ್ಕಾಗಿ ಮೂರು ವಾರಗಳ ಪೆರೋಲ್ ಮಂಜೂರು ಮಾಡಿದೆ.
ನೂಪುರ್ ತಲ್ವಾರ್ ಹಾಗೂ ಆಕೆಯ ಪತಿ ರಾಜೇಶ್ ತಲ್ವಾರ್ ಇಬ್ಬರೂ ಜೋಡಿ ಕೊಲೆ ಪ್ರಕರಣ ಸಂಬಂಧ 2013ರಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
2008 ಮೇ 16ರಂದು 14ರ ಹರೆಯದ ಆರುಷಿ ನೋಯ್ಡಾದಲ್ಲಿರುವ ತಮ್ಮ ಮನೆಯಲ್ಲಿ ಹತ್ಯೆಗೀಡಾಗಿದ್ದಳು. ಈ ಹತ್ಯೆ ನಡೆದ ಮರುದಿನ ಮನೆಯ ಕೆಲಸದಾಳು ಹೇಮರಾಜ್ ಅವರ ಶವ ಮನೆಯ ಮಹಡಿ ಮೇಲೆ ಪತ್ತೆಯಾಗಿತ್ತು.