ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸರ ಭಾರತೀಯ ರಾಷ್ಟ್ರೀಯ ಸೇನೆ (ಐಎನ್ಎ)ಗೆ ಬಂದಿದ್ದ ದೇಣಿಗೆ ಹಣವನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳಲು 1953 ರಲ್ಲಿ ಭಾರತ ಸರ್ಕಾರ ನಿರ್ಧರಿಸಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ.
ಮಂಗಳವಾರ ಬಿಡುಗಡೆಗೊಂಡ ನೇತಾಜಿ ಸುಭಾಷ್ ಚಂದ್ರ ಬೋಸರ ರಹಸ್ಯ ಕಡತಗಳ ಮೂಲಕ ಈ ಮಾಹಿತಿ ಬಹಿರಂಗಗೊಂಡಿದ್ದು ಅಂದಿನ ಪ್ರಧಾನಿ ಜವಹಾರ್ ಲಾಲ್ ನೆಹರು ನೇತಾಜಿ ಅವರ ಐಎನ್ಎ ಗೆ ಸೇರಿದ್ದ ಸಂಪತ್ತನ್ನು ಪಾಕಿಸ್ತಾನದೊಂದಿಗೆ ಹಂಚಿಕೊಳ್ಳಲು ಒಪ್ಪಿದ್ದರು ಎಂದು ತಿಳಿದುಬಂದಿದೆ.
ಜವಹರ್ ಲಾಲ್ ನೆಹರು ಪಶ್ಚಿಮ ಬಂಗಾಳದ ಅಂದಿನ ಸಿಎಂ ಬಿಸಿ ರಾಯ್ ಗೆ ಬರೆದಿದ್ದ ಪಾತ್ರದ ಮೂಲಕ ಈ ಮಾಹಿತಿ ಬಹಿರಂಗವಾಗಿದೆ. ನೇತಾಜಿ ಸುಭಾಷ್ ಚಂದ್ರ ಸಬೋಸರ ನಿಗೂಢ ನಾಪತ್ತೆ ಬಳಿಕ ಅವರು ಸ್ಥಾಪಿಸಿದ್ದ ಭಾರತೀಯ ರಾಷ್ಟ್ರೀಯ ಸೇನೆ, ಆಜಾದ್ ಹಿಂದ್ ಸರ್ಕಾರದ ಆಸ್ತಿಯ ಬಗ್ಗೆ ತನಿಖೆ ನಡೆಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರ ಸರ್ಕಾರಕ್ಕೆ ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದ ಜವಾಹರ್ ಲಾಲ್ ನೆಹರು, ದಕ್ಷಿಣ ಹಾಗೂ ಆಗ್ನೇಯ ಏಷ್ಯಾ ರಾಷ್ಟ್ರಗಳಲ್ಲಿದ್ದ ಐಎನ್ಎ ಹಾಗೂ ಇಂಡಿಯನ್ ಇಂಡಿಪೆಂಡೆಂಟ್ ಲೀಗ್( ಐಐಎಲ್) ಗೆ ಸೇರಿದ ಅಪಾರ ಪ್ರಮಾಣದ ಉತ್ಕೃಷ್ಟ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೆಹರು ಪತ್ರದಲ್ಲಿ ತಿಳಿಸಿದ್ದರು. ಅಷ್ಟೇ ಅಲ್ಲದೆ ಅವುಗಳನ್ನು 2:1 ಅನುಪಾತದಲ್ಲಿ ಪಾಕಿಸ್ತಾನದೊಂದಿಗೆ ಹಂಚಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು ಎಂಬುದು ರಹಸ್ಯ ಕಡತಗಳ ಮೂಲಕ ಬಹಿರಂಗವಾಗಿದೆ.
Advertisement