ನವದೆಹಲಿ: ನಿನ್ನೆಯಷ್ಟೇ ಚುನಾವಣಾ ಪೂರ್ವ ಮೈತ್ರಿಯನ್ನು ತಳ್ಳಿಹಾಕಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಶುಕ್ರವಾರ ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಗೆ ಒಲವು ತೊರಿದ್ದಾರೆ. ಅಲ್ಲದೆ ಎಸ್ಪಿ-ಕಾಂಗ್ರೆಸ್ ಮೈತ್ರಿ 403 ವಿಧಾನಸಭಾ ಕ್ಷೇತ್ರಗಳ ಪೈಕಿ 300ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದಾರೆ.
ಕಳೆದ ತಿಂಗಳಷ್ಟೇ ಅಖಿಲೇಶ್ ಯಾದವ್ ಅವರ ತಂದೆ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಸಹ ಯಾವುದೇ ಪಕ್ಷಗಳೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕೇವಲ ವಿಲಿನಗೊಳಿಸಬಹುದು ಎಂದು ಹೇಳಿದ್ದರು.
ಮೈತ್ರಿ ಸಂಬಂಧ ಕಾಂಗ್ರೆಸ್ ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಅವರು ಮುಲಾಯಂ ಸಿಂಗ್ ಅವರನ್ನು ಮತ್ತು ತಮ್ಮನ್ನು ಭೇಟಿ ಮಾಡಿದ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಮೈತ್ರಿಗೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ತಾವು ಕೇವಲ ಸಲಹೆ ಮಾತ್ರ ನೀಡಬಹುದು ಎಂದರು.
ಇದೇ ವೇಳೆ ಕಾಂಗ್ರೆಸ್ ಸ್ಥಾನಗಳಿಗಾಗಿ ಜಟಾಪಟಿ ಮಾಡುವುದು ಬೇಡ. ಲಾಭ-ನಷ್ಟದ ಬಗ್ಗೆ ವಿಚಾರ ಮಾಡಿದರೆ ನಾವು ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲ್ಲು ಸಾಧ್ಯವಾಗುವುದಿಲ್ಲ ಎಂದು ಅಖಿಲೇಸ್ ಯಾದವ್ ಅವರು ಸಲಹೆ ನೀಡಿದ್ದಾರೆ.