ನವದೆಹಲಿ: ರಾಷ್ಟ್ರಗೀತೆಯನ್ನು ಎಲ್ಲಾ ನ್ಯಾಯಾಲಯಗಳಲ್ಲಿ ಕಡ್ಡಾಯವಾಗಿ ನುಡಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಅರ್ಜಿಯು ಸೂಕ್ತ ಔಪಚಾರಿಕ ವಿಧಾನದಲ್ಲಿಲ್ಲ ಎಂದು ಹೇಳಿರುವ ನ್ಯಾಯಾಲಯ ಸರಿಯಾಗಿ ಮನವಿ ಸಲ್ಲಿಸುವಂತೆ ಸೂಚಿಸಿದೆ. ಈ ವಿಷಯದಲ್ಲಿ ಅಟೊರ್ನಿ ಜನರಲ್ ಅವರ ಸಹಾಯ ಪಡೆಯುವಂತೆ ಕೋರ್ಟ್ ಹೇಳಿದೆ.
ಎಲ್ಲಾ ಚಲನಚಿತ್ರ ಮಂದಿರಗಳಲ್ಲಿ ಚಿತ್ರ ಪ್ರಸಾರಕ್ಕೆ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ನುಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ನಂತರ ನ್ಯಾಯಾಲಯಗಳಲ್ಲಿ ಕೂಡ ರಾಷ್ಟ್ರಗೀತೆಯನ್ನು ನುಡಿಸುವುದನ್ನು ಕಡ್ಡಾಯ ಮಾಡಬೇಕೆಂದು ಭೋಪಾಲ್ ನ ನಿವೃತ್ತ ಎಂಜಿನಿಯರ್ ಶ್ಯಾಮ್ ನಾರಾಯಣ್ ಚೌಕ್ಸೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್, ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆ ನುಡಿಸುವುದನ್ನು ಕಡ್ಡಾಯ ಮಾಡಿದ ನಂತರ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿ ಸಂಸತ್ತು, ರಾಜ್ಯ ವಿಧಾನಸಭೆಗಳು ಮತ್ತು ಕೋರ್ಟ್ ಗಳಲ್ಲಿ ಕೂಡ ಕಡ್ಡಾಯ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.