ಪಾವತಿ ಸುದ್ದಿ ಪ್ರಸಾರವನ್ನು ಗ್ರಾಹ್ಯ ಅಪರಾಧವನ್ನಾಗಿಸಿ: ಕೇಂದ್ರಕ್ಕೆ ಚುನಾವಣಾ ಆಯೋಗ
ದೇಶ
ಪಾವತಿ ಸುದ್ದಿ ಪ್ರಸಾರವನ್ನು ಗ್ರಾಹ್ಯ ಅಪರಾಧವನ್ನಾಗಿಸಿ: ಕೇಂದ್ರಕ್ಕೆ ಚುನಾವಣಾ ಆಯೋಗ
ಪಾವತಿ ಸುದ್ದಿಯನ್ನು ಗ್ರಾಹ್ಯ ಅಪರಾಧವನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಮನವಿ ಮಾಡಿದ್ದಾರೆ.
ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಹಣದ ಪ್ರಾಬಲ್ಯ ಹಾಗೂ ಪಾವತಿ ಸುದ್ದಿಯ ಪ್ರಸಾರದ ಅಕ್ರಮಗಳು ಹೆಚ್ಚುವ ಸಾಧ್ಯತೆಯನ್ನು ಊಹಿಸಿರುವ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ, ಪಾವತಿ ಸುದ್ದಿಯನ್ನು ಗ್ರಾಹ್ಯ ಅಪರಾಧವನ್ನಾಗಿ ಮಾಡಲು ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪಾವತಿ ಸುದ್ದಿಗಳಿಗೆ ಕಡಿವಾಣ ಹಾಕಲು ಮಸೂದೆಯನ್ನು ರೂಪಿಸುವ ಆಯ್ಕೆಯನ್ನೂ ಪರಿಗಣಿಸುವಂತೆ ಚುನಾವಣಾ ಆಯೋಗದ ಮುಖ್ಯಸ್ಥರು ಸೂಚನೆ ನೀಡಿದ್ದು, ಪಾವತಿ ಸುದ್ದಿಯನ್ನು ನಿರ್ದಿಷ್ಟ ಅಪರಾಧದ ಪಟ್ಟಿಗೆ ಸೇರಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಕೆಲವು ಸೂಚನೆಗಳನ್ನು ನೀಡಿರುವ ಚುನಾವಣಾ ಆಯೋಗ, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಹಾಗೂ ಅವರ ಏಜೆಂಟ್ ಗಳು ಮತದಾರರಿಗೆ ಹಣ ಹಂಚುವುದನ್ನು ಸಿಆರ್ ಪಿಸಿ ಅಡಿಯಲ್ಲಿ ಗ್ರಾಹ್ಯ ಅಪರಾಧಗಳ ಪಟ್ಟಿಗೆ ಸೇರಿಸಬೇಕು ಎಂದು ಸೂಚನೆ ನೀಡಿದ್ದು, ಇದರಿಂದಾಗಿ ಅಪರಾಧಿಗಳನ್ನು ಜಾಮೀನು ರಹಿತವಾಗಿ ಬಂಧಿಸಬಹುದಾಗಿದೆ ಎಂದು ಹೇಳಿದ್ದಾರೆ.
ಇನ್ನು ಸುಳ್ಳು ಪ್ರಮಾಣ ಪತ್ರ ಸಲ್ಲಿಸುವ ಅಭ್ಯರ್ಥಿಗಳಿಗೆ ವಿಧಿಸಲಾಗುತ್ತಿರುವ 6 ತಿಂಗಳ ಜೈಲು ಶಿಕ್ಷೆಯನ್ನು 2 ವರ್ಷಕ್ಕೆ ಏರಿಕೆ ಮಾಡಾಬೇಕು ಹಾಗೂ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಮಾಡಬೇಕು ಎಂದು ಜೈದಿ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದು, ಈ ಎಲ್ಲಾ ಅಂಶಗಳನ್ನು ಮಸೂದೆಯಿಂದ ಜಾರಿಗೆ ತರಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ