ನವದೆಹಲಿ: ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್)ಯಲ್ಲಿ ಶನಿವಾರ ಕಿಡ್ಮಿ ಕಸಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
ಏಮ್ಸ್ ನ ನಿರ್ದೇಶಕರಾದ ಎಂಸಿ ಮಿಶ್ರಾ ಹಾಗೂ ತಜ್ಞರಾದ ವಿ.ಕೆ. ಬನ್ಸಾಲ್ ಮತ್ತು ಸಂದೀಪ್ ಅಗರ್ ವಾಲ್ ನೇತೃತ್ವದ ತಂಡ ಸುಮಾರು ಔದು ಗಂಟೆಗಳ ಸುದೀರ್ಘ ಅವಧಿಯ ಶಸ್ತ್ರಚಿಕಿತ್ಸೆ ನಡೆಸುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ವಿದೇಶಾಂಗ ಸಚಿವೆಗಾಗಿ ಜೀವಂತವಿರುವ ದಾನಿಯಿಂದ ಕಿಡ್ನಿಯನ್ನು ಪಡೆಯಲಾಗಿದ್ದು, ಕಿಡ್ನಿ ದಾನ ಮಾಡುತ್ತಿರುವವರು ಹಾಗೂ ಸುಷ್ಮಾ ಸ್ವರಾಜ್ ಅವರ ಕಿಡ್ನಿ ಹೊಂದಾಣಿಕೆ ತಪಾಸಣೆ ಸಂಪೂರ್ಣಗೊಂಡಿದ್ದು, ಏಮ್ಸ್ ನ ತಜ್ಞರು ಈಗ ಶಸ್ತ್ರ ಚಿಕಿತ್ಸೆ ನಡೆಸುತ್ತಿದ್ದಾರೆ.
ನ.16 ರಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಷ್ಮಾ ಸ್ವರಾಜ್ ಅವರು ದೀರ್ಘಾವಧಿ ಮಧುಮೇಹದಿಂದ ಬಳಲುತ್ತಿದ್ದು, ಕಿಡ್ನಿ ವೈಫಲ್ಯದ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆಗೂ ಮುನ್ನ ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದರು.