ಘೋಷಣೆ ಕೂಗುವುದರಿಂದ ಹೊರಬನ್ನಿ; ನೋಟು ನಿಷೇಧದ ಪ್ರಯೋಜನಗಳನ್ನು ನೋಡಿ: ಅರುಣ್ ಜೇಟ್ಲಿ

ಘೋಷಣೆಗಳಿಗಿಂತ ಮಿಗಿಲಾಗಿ ಚಳವಳಿಯಲ್ಲಿ ನಮ್ಮೊಂದಿಗೆ ಕೈಜೋಡಿಸಿ ಎಂದು ವಿರೋಧ ಪಕ್ಷಗಳಿಗೆ ಹಣಕಾಸು ಸಚಿವ...
ಹಣಕಾಸು ಸಚಿವ ಅರುಣ್ ಜೇಟ್ಲಿ
ಹಣಕಾಸು ಸಚಿವ ಅರುಣ್ ಜೇಟ್ಲಿ
ನವದೆಹಲಿ: ದೇಶದಲ್ಲಿ ಕಪ್ಪು ಹಣ ಸಂಗ್ರಹವನ್ನು ಕೊನೆಗಾಣಿಸಲು, ಭ್ರಷ್ಟಾಚಾರ, ನಕಲಿ ನೋಟುಗಳ ಹಾವಳಿಯನ್ನು ತಡೆಗಟ್ಟಲು ನವೆಂಬರ್ 8ರಂದು ಘೋಷಣೆ ಮಾಡಿದ ಅನಾಣ್ಯೀಕರಣ ಯೋಜನೆಯ ಪ್ರಕ್ರಿಯೆಗಳನ್ನು ಕೇಂದ್ರ ಸರ್ಕಾರ ಪೂರ್ಣಗೊಳಿಸಲಿದೆ. ಇನ್ನು ಮೂರು ವಾರಗಳಲ್ಲಿ ಗಮನಾರ್ಹ ಪ್ರಮಾಣದಲ್ಲಿ ಹಣವನ್ನು ಬ್ಯಾಂಕುಗಳಿಗೆ ಪೂರೈಸಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಕಾಂಗ್ರೆಸ್ ಪಕ್ಷವನ್ನು ಇದೇ ಸಂದರ್ಭದಲ್ಲಿ ತರಾಟೆಗೆ ತೆಗೆದುಕೊಂಡ ಅವರು, ಭ್ರಷ್ಟಾಚಾರ ಮತ್ತು ಹಗರಣ ಅವರ ಆಡಳಿತ ಸಂದರ್ಭದಲ್ಲಿ ಉನ್ನತ ಮಟ್ಟಕ್ಕೆ ಹೋಗಿತ್ತು. ಅವರು ಯಾಕೆ ನೋಟುಗಳ ಅಪಮೌಲ್ಯವನ್ನು ವಿರೋಧಿಸುತ್ತಾರೆ ಎಂಬುದು ಇದರಿಂದ ಅರ್ಥವಾಗುತ್ತದೆ. ಕಾಂಗ್ರೆಸ್ ಪಕ್ಷದ ಎರಡು ವೈಶಿಷ್ಟ್ಯ ಗುಣಗಳೆಂದರೆ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಎಂದು ಟೀಕಿಸಿದರು.
500 ಮತ್ತು 1000 ಮೌಲ್ಯದ ನೋಟುಗಳ ನಿಷೇಧದಿಂದ ಭವಿಷ್ಯದಲ್ಲಿನ ಪ್ರಯೋಜನಗಳನ್ನು ಹೇಳಿದ ಅವರು, ಮುಂದಿನ ದಿನಗಳಲ್ಲಿ ಹಣದ ವಹಿವಾಟುಗಳು ಡಿಜಿಟಲೀಕರಣವಾಗುವುದರಿಂದ ಅವುಗಳು ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಇದರಿಂದ ಖಂಡಿತಾ ಪ್ರಯೋಜನವಿದೆ. ಕೆಲವು ಅಸ್ಥಿರ ಸಮಸ್ಯೆಗಳನ್ನು ಆರಂಭದಲ್ಲಿ ಜನರು ಎದುರಿಸಬೇಕಾಗಬಹುದು ಎಂದರು.
ಘೋಷಣೆಗಳಿಗಿಂತ ಮಿಗಿಲಾಗಿ ಚಳವಳಿಯಲ್ಲಿ ನಮ್ಮೊಂದಿಗೆ ಕೈಜೋಡಿಸಿ ಎಂದು ವಿರೋಧ ಪಕ್ಷಗಳಿಗೆ ಅವರು ಒತ್ತಾಯಿಸಿದರು. ಆಡಳಿತ ಪಕ್ಷ ನೋಟು ನಿಷೇಧ ಕುರಿತು ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧವಿದೆ ಎಂದು ಅವರು ಮತ್ತೊಮ್ಮೆ ಪ್ರತಿಪಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com