ಕೊಚ್ಚಿ: ಕೇರಳದ ಸೋಲಾರ್ ಹಗರಣದ ಆರೋಪಿಗಳಾದ ಬಿಜು ರಾಧಾಕೃಷ್ಣನ್ ಮತ್ತು ಸರಿತಾ.ಎಸ್.ನಾಯರ್ ಗೆ ಎರ್ನಾಕುಲಂ ನ್ಯಾಯಾಲಯ ಮೂರು ವರ್ಷಗಳ ಶಿಕ್ಷೆ ವಿಧಿಸಿದೆ.
ಸರಿತಾ ನಾಯರ್ ಮತ್ತು ಆಕೆಯ ಲಿವ್ ಇನ್ ಪಾರ್ಟನರ್ ಇಬ್ಬರಿಗೂ 3 ವರ್ಷ ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಲಯ ತಲಾ 10ಸಾವಿರ ರು ರುಪಾಯಿ ದಂಡ ವಿಧಿಸಿದೆ. ಕಳೆದ ಮೂರು ವರ್ಷಗಳ ಹಿಂದೆ ಭಾರೀ ಸುದ್ದಿ ಮಾಡಿದ್ದ ಕೇರಳ ಸೋಲಾರ್ ಹಗರಣದ ಆರೋಪಿಗಳಿಗೆ ಮೊದಲ ಬಾರಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
8 ತಿಂಗಳು ಜೈಲು ವಾಸ ಅನುಭವಿಸಿದ್ದ ಸರಿತಾ ನಾಯರ್ 2014 ರ ಫೆಬ್ರವರಿಯಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದರು. ಕಣ್ಣೂರಿನಲ್ಲಿ ಸೋಲಾರ್ ಫಲಕ ಅಳವಡಿಕೆ ಘಟಕ ಸ್ಥಾಪಿಸಲು ತನ್ನನ್ನು ಕರೆದು ಕಾಂಗ್ರೆಸ್ ಶಾಸಕ ಎ.ಪಿ ಅದುಲ್ ಕುಟ್ಟಿ ತಿರುವನಂತಪುರದ ಸರ್ಕಾರಿ ಹೋಟೆಲ್ ಮೇಲೆ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು 2014 ರಲ್ಲಿ ಸರಿತಾ ನಾಯರ್ ದೂರು ದಾಖಲಿಸಿದ್ದರು. ಜೈಲಿನಿಂದ ಹೊರಬಂದ ನಂತರ ಪ್ರಕರಣವನ್ನು ಜೀವಂತವಾಗಿಡಲು ಸರಿತಾ ನಾಯರ್ ಪ್ರಕರಣ ಸಂಬಂಧ ಪ್ರತಿದಿನ ರಾಜಕಾರಣಿಗಳು ಮತ್ತು ಅವರ ಆಪ್ತರ ಹೆಸರುಗಳನ್ನು ಬಹಿರಂಗ ಪಡಿಸಿದ್ದರು.
ಸೌರ ವಿದ್ಯುತ್ ಘಟಕ ಸ್ಥಾಪಿಸಲು ಕೆ. ಎಂ. ಸಾಜದ್ ಎಂಬವರಿಂದ ಈ ಇಬ್ಬರು ಮೊದಲ ಕಂತಿನಲ್ಲಿ 20 ಲಕ್ಷ ರು ಹಣ ಪಡೆದಿದ್ದರು. ಅಂದಿನ ಕೇರಳ ಮುಖ್ಯಮಂತ್ರಿ ಉಮರ್ ಚಾಂಡಿಯ ಸಹಿ ಮತ್ತು ಮೊಹರು ಇರುವ ಪತ್ರವನ್ನು ನಂಬಿ ಸಾಜದ್ ಹಣ ಕೊಟ್ಟಿದ್ದರು.
ವಿವಿಧ ವ್ಯಕ್ತಿಗಳಿಗೆ ಮತ್ತು ಸಂಸ್ಥೆಗಳಿಗೆ ರಾಧಾಕೃಷ್ಣನ್ ಮತ್ತು ಸರಿತಾ ಮುಖ್ಯಮಂತ್ರಿಯ ಸಹಿ ಮತ್ತು ಮೊಹರು ಇರುವ ಲೆಟರ್ಹೆಡ್ನಲ್ಲಿ ಪತ್ರ ಬರೆದು ಸೌರ ವಿದ್ಯುತ್ ಘಟಕಗಳಲ್ಲಿ ಹೂಡಿಕೆ ಮಾಡಲು ವಿನಂತಿಸಿದ್ದರು. ಎಮರ್ಜಿಂಗ್ ಕೇರಳ ಅಭಿಯಾನದಂಗವಾಗಿ ಕೇರಳ ಸರಕಾರ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಬಹಳ ಪ್ರೋತ್ಸಾಹ ನೀಡುತ್ತಿದೆ. ಮುಖ್ಯಮಂತ್ರಿ ಮೂಲಕ ಶಿಫಾರಸು ಮಾಡಿಸಿ ತ್ವರಿತವಾಗಿ ಲೈಸೆನ್ಸ್ ಸಿಗುವಂತೆ ಮಾಡುತ್ತೇವೆ ಎಂದು ಅವರು ಉದ್ಯಮಿಗಳನ್ನು ನಂಬಿಸಿದ್ದರು.
Advertisement