ಕೊಲ್ಕೋತಾ; ನರೇಂದ್ರ ಮೋದಿ ಸರ್ಕಾರ ಕಿವುಡ ಹಾಗೂ ಮೂಕ ಸರ್ಕಾರವಾಗಿದೆ. ಚಾಯ್ ವಾಲಾ ಆಗಿದ್ದವರು ಈಗ ಪೇಟಿಎಂ ವಾಲಾ ಆಗಿದ್ದಾರೆ ಎಂದು ಮೋದಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
ಬಾಂಕುರ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಮೊದಲು ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಚಾಯ್ ವಾಲಾ ಎಂದು ಕರೆದು ಕೊಳ್ಳುತ್ತಿದ್ದರು. ಈಗ ಅವರು ಮಿಲಿಯನೇರ್ ಪೇಟಿಮ್ ವಾಲಾ ಆಗಿದ್ದಾರೆ ಎಂದು ಟೀಕಿಸಿದ್ದಾರೆ.
ಜನ ಸಾಮಾನ್ಯರು ತಾವು ಕಷ್ಟ ಪಟ್ಟು ದುಡಿದ ಹಣವನ್ನು ಎಲ್ಲಿ ಕೂಡಿಡಬೇಕು ಎಂದು ಆಗ್ರಹಿಸುವ ಹಕ್ಕು ಮೋದಿಗಿಲ್ಲ, ನೋಟು ನಿಷೇಧ ಕ್ರಮ ದೇಶದಲ್ಲಿ ದೊಡ್ಡ ತಲೆನೋವಾಗಿದೆ ಎಂದ ಮಮತಾ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ದೇಶದಲ್ಲಿರುವ ಸರ್ಕಾರ ಕಿವುಡ ಹಾಗೂ ಮೂಕವಾಗಿದೆ. ಒತ್ತಾಯದ ಆಡಳಿತಕ್ಕೆ ಇಡೀ ದೇಶವನ್ನೇ ಬಲವಂತವಾಗಿ ತಳ್ಳುತ್ತಿದ್ದಾರೆ ಎಂದು ಮಮತಾ ಆರೋಪಿಸಿದ್ದಾರೆ.
Advertisement