ಅಗಸ್ಟಾ ಹಗರಣ: ವಾಯುಪಡೆ ಮಾಜಿ ಮುಖ್ಯಸ್ಥ ಎಸ್‌.ಪಿ ತ್ಯಾಗಿಗೆ ಜಾಮೀನು

ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಹಗರಣದ ಪ್ರಮುಖ ಆರೋಪಿ ವಾಯುಪಡೆ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿಗೆ ಡಿ.26 ರಂದು ಜಾಮೀನು ಮಂಜೂರು ಮಾಡಲಾಗಿದೆ.
ಎಸ್‌.ಪಿ ತ್ಯಾಗಿ
ಎಸ್‌.ಪಿ ತ್ಯಾಗಿ
ನವದೆಹಲಿ: ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಫ್ಟರ್ ಹಗರಣದ ಪ್ರಮುಖ ಆರೋಪಿ ವಾಯುಪಡೆ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಡಿ.26 ರಂದು ಜಾಮೀನು ಮಂಜೂರು ಮಾಡಿದೆ. 
ಹಗರಣದ ಸಂಬಂಧ ತನಿಖೆ ನಡೆಸುತ್ತಿರುವ ಸಿಬಿಐ ಡಿ.9 ರಂದು ತ್ಯಾಗಿ ಸೇರಿದಂತೆ ಮೂವರನ್ನು ಬಂಧಿಸಿತ್ತು. 3,600 ಕೋಟಿ ರು. ಮೌಲ್ಯದ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಎಸ್.ಪಿ.ತ್ಯಾಗಿ, ಅವರ ಸಹೋದರ ಸಂಬಂಧಿ ಸಂಜೀವ್ ತ್ಯಾಗಿ ಹಾಗೂ ಗೌತಮ್ ಖೇತನ್ ಅವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. 
ಎಸ್ ಪಿ ತ್ಯಾಗಿ ಮತ್ತು ಅವರ ಸಹೋದರ ಸಂಬಂಧಿಗಳು ಸೇರಿ ಒಟ್ಟು 13 ಮಂದಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದ್ದು, ತ್ಯಾಗಿ ಅವರು ಅಗಸ್ಟಾ ವೆಸ್ಟ್​ಲ್ಯಾಂಡನ್ನು ಹರಾಜುದಾರರ ಪಟ್ಟಿಗೆ  ಸೇರ್ಪಡೆ ಮಾಡಲು ಅನುಕೂಲವಾಗುವಂತೆ, ಹೆಲಿಕಾಪ್ಟರ್​ನ ಹಾರಾಟದ ಮಿತಿಯನ್ನು 6,000 ಮೀ.ನಿಂದ 4500 ಮೀ.ಗಳಿಗೆ (15,000 ಅಡಿಗಳು) ಇಳಿಸಿದರು. ಇದಕ್ಕೆ ಪ್ರತಿಯಾಗಿ ತ್ಯಾಗಿ  ಭಾರಿ ಪ್ರಮಾಣದ ಕಿಕ್ ಬ್ಯಾಕ್ ಪಡೆದಿದ್ದರು ಎಂಬ ಆರೋಪವನ್ನು ಅವರ ವಿರುದ್ಧ ಮಾಡಲಾಗಿದೆ.
ದೇಶದ ಅತಿ ಪ್ರಮುಖ ಗಣ್ಯರ ಪಯಣಕ್ಕೆ ಅಗಸ್ಟಾ ವೆಸ್ಟ್‌ ಲ್ಯಾಂಡ್‌ನಿಂದ 12 ಹೆಲಿಕಾಪ್ಟರ್ಗಳನ್ನು ಕೊಳ್ಳಲು 2010ರಲ್ಲಿ ಭಾರತೀಯ ವಾಯುಪಡೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಇದರಲ್ಲಿ ಭಾರಿ ಪ್ರಮಾ ಣದ ಅವ್ಯವಹಾರ ನಡೆದಿದ್ದು, ಪ್ರತಿಸ್ಪಧಿಗಳನ್ನು ಹಣಿಯಲು ಅಗಸ್ಟಾ ವೆಸ್ಟ್‌ ಲ್ಯಾಂಡ್ ನೂರಾರು ಕೋಟಿ ರುಪಾಯಿ ಕಿಕ್‌ಬ್ಯಾಕ್ ನೀಡಿದೆ ಎಂಬ ಆರೋಪದ ಮೇಲೆ ಫೆಬ್ರವರಿ 12, 2013ರಲ್ಲಿ ಇಟಲಿ ಪೊಲೀಸರು ಅಗಸ್ಟಾ ವೆಸ್ಟ್‌ ಲ್ಯಾಂಡ್ ಮಾತೃ ಸಂಸ್ಥೆ ಫಿನ್‌ಮೆಕ್ಯಾನಿಕಾದ ಮುಖ್ಯಸ್ಥ ಜುಸೆಪ್ಪಿ ಒರ್ಸಿಯನ್ನು ಬಂಧಿಸಿದ್ದರು. ಇದಾದ ಬಳಿಕ ಹೆಲಿಕಾಪ್ಟರ್ ಖರೀದಿ ಹಗರಣ ಬಯಲಿಗೆ ಬಂದಿತು. ತಕ್ಷಣವೇ ಭಾರತದ ಅಂದಿನ ರಕ್ಷಣಾ ಸಚಿವ ಎ.ಕೆ.ಆಂಟನಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com