ನವದೆಹಲಿ: ಭಾರತ-ನಾರ್ವೆ ಕುಟುಂಬದ ಬಾಲಕನೊಬ್ಬನ ಪಾಲನೆಗೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಐದೂವರೆ ವರ್ಷದ ಬಾಲಕ ಆರ್ಯನ್ ತನ್ನ ನಿಜವಾದ ಪೋಷಕರ ಮಡಿಲು ಸೇರಬೇಕೆಂದು ಹೇಳಿದ್ದಾರೆ.
ಸಾಕು ತಂದೆ-ತಾಯಂದಿರು ಮಕ್ಕಳನ್ನು ಸ್ವಾಭಾವಿಕ ಪೋಷಕರಿಗಿಂತ ಚೆನ್ನಾಗಿ ನೋಡಿಕೊಳ್ಳಬಹುದು ಎಂಬ ಮಾತನ್ನು ನಾನು ಒಪ್ಪುವುದಿಲ್ಲ. ನಾರ್ವೆಯಲ್ಲಿರುವ ಭಾರತೀಯ ರಾಯಭಾರಿ ಅಲ್ಲಿನ ಅಧಿಕಾರಿಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಆರ್ಯನ್ ನ ಸಾಕು ತಂದೆ-ತಾಯಂದಿರಿಗೆ ಭಾರತದ ಸಂಸ್ಕೃತಿ, ಆಹಾರ ಪದ್ಧತಿಗಳ ಬಗ್ಗೆ ಅರಿವಿಲ್ಲ. ಆರ್ಯನ್ ಮತ್ತೆ ತನ್ನ ಜನ್ಮದಾತರ ಬಳಿ ಒಂದಾಗುವುದನ್ನು ನಾವು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ.
ಆರ್ಯನ್ ನ ತಾಯಿ ಗುರ್ವಿಂದರ್ ಜಿತ್ ಕೌರ್ ಭಾರತೀಯಳಾದರೆ ತಂದೆ ನಾರ್ವೆ ಪ್ರಜೆ.
ತಾಯಿ ಕೌರ್ ಈ ಕುರಿತು ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ತಮ್ಮ ಮಗನನ್ನು ವಾಪಸ್ ನೀಡಬೇಕೆಂದು ಕೋರಿದ್ದಾರೆ.
ಆರ್ಯನ್ ನನ್ನು ನಾರ್ವೆ ಮಕ್ಕಳ ಅಭಿವೃದ್ಧಿ ಸೇವೆಗಳ ಇಲಾಖೆ ನೋಡಿಕೊಳ್ಳುತ್ತಿತ್ತು. ಮಕ್ಕಳನ್ನು ಸರಿಯಾರಿ ನೋಡಿಕೊಳ್ಳುವುದಿಲ್ಲ, ನಿಂದಿಸುತ್ತಾರೆ ಎಂದು ಆರೋಪಿಸಿ ನಾರ್ವೆ ಅಧಿಕಾರಿಗಳು ಭಾರತದ ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ಮೂರನೇ ಪ್ರಕರಣವಿದು.
2011ರಲ್ಲಿ 3 ವರ್ಷ ಮತ್ತು 1 ವರ್ಷದ ಮಕ್ಕಳನ್ನು ಅವರ ಪೋಷಕರಿಂದ ದೂರ ಮಾಡಲಾಗಿತ್ತು. ನಂತರ ಆಗಿನ ಯುಪಿಎ ಸರ್ಕಾರ ಆ ಮಕ್ಕಳನ್ನು ವಾಪಸ್ ನಿಜವಾದ ಪೋಷಕರ ಮಡಿಲಿಗೆ ಒಪ್ಪಿಸಿತ್ತು. 2012ರಲ್ಲಿ ತಮ್ಮ 7 ವರ್ಷ ಮತ್ತು 2 ವರ್ಷದ ಮಕ್ಕಳಿಗೆ ಹಿಂಸೆ ನೀಡುತ್ತಿದ್ದಾರೆಂದು ನಾರ್ವೆ ಅಧಿಕಾರಿಗಳು ಅವರನ್ನು ಜೈಲಿಗೆ ಕಳುಹಿಸಿದ್ದರು. ನಂತರ ಮಕ್ಕಳನ್ನು ಹೈದರಾಬಾದಿನಲ್ಲಿರುವ ಅವರ ಅಜ್ಜಿ-ತಾತರ ಮನೆಗೆ ಕಳುಹಿಸಲಾಗಿತ್ತು.