ದೇಶ
ಪಟಿಯಾಲ ಕೋರ್ಟ್ ಬಳಿ ಗಲಾಟೆ: ದೆಹಲಿ ಪೊಲೀಸ್ ಆಯುಕ್ತರಿಗೆ, ಗೃಹ ಸಚಿವಾಲಯಕ್ಕೆ ನೋಟಿಸ್
‘ರಾಷ್ಟ್ರದ್ರೋಹ’ ಆರೋಪದ ಮೇಲೆ ಬಂಧಿತರಾಗಿರುವ ಕನ್ಹಯ್ಯ ಕುಮಾರ್ ಅವರನ್ನು ಎರಡು ದಿನಗಳ ಹಿಂದೆ ವಿಚಾರಣೆಗೆ ಹಾಜರು ಪಡಿಸಿದ ವೇಳೆ ದೆಹಲಿಯ...
ನವದೆಹಲಿ: ‘ರಾಷ್ಟ್ರದ್ರೋಹ’ ಆರೋಪದ ಮೇಲೆ ಬಂಧಿತರಾಗಿರುವ ಕನ್ಹಯ್ಯ ಕುಮಾರ್ ಅವರನ್ನು ಎರಡು ದಿನಗಳ ಹಿಂದೆ ವಿಚಾರಣೆಗೆ ಹಾಜರು ಪಡಿಸಿದ ವೇಳೆ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಬಳಿ ಸಂಭವಿಸಿದ ಹಿಂಸಾಚಾರ ಪ್ರಕರಣ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ದೆಹಲಿ ಪೊಲೀಸ್ ಆಯುಕ್ತರಿಗೆ ಹಾಗೂ ಕೇಂದ್ರ ಗೃಹ ಸಚಿವಾಲಯಕ್ಕೆ ನೋಟಿಸ್ ನೀಡಿದೆ.
ಘಟನೆ ವೇಳೆ ಪೊಲೀಸರು ಏಕೆ ಮೂಕಪ್ರೇಕ್ಷಕರಾಗಿದ್ದರು? ಎಂದು ಪ್ರಶ್ನಿಸಿರುವ ಮಾನವ ಹಕ್ಕುಗಳ ಆಯೋಗ, ಘಟನೆಯ ವಿವರ ನೀಡುಂತೆ ಗೃಹ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಹಾಗೂ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್.ಬಸ್ಸಿ ಅವರಿಗೆ ಸೂಚಿಸಿದೆ.
ಪಟಿಯಾಲ ಹೌಸ್ ಕೋರ್ಟ್ ಬಳಿ ದೆಹಲಿ ಬಿಜೆಪಿ ಶಾಸಕ ಹಾಗೂ ಕಾರ್ಯಕರ್ತರು ಹಲವು ವಿದ್ಯಾರ್ಥಿಗಳ ಮೇಲೆ ಹಾಗೂ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಘರ್ಷಣೆ ವೇಳೆ ಕೆಳಗೆ ಬಿದ್ದ ವ್ಯಕ್ತಿಯನ್ನು ಬಿಜೆಪಿ ಶಾಸಕ ಒ.ಪಿ.ಶರ್ಮಾ ಅವರು ಕಾಲಿನಿಂದ ಒದ್ದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಆರೋಪವನ್ನು ತಳ್ಳಿಹಾಕಿರುವ ಶರ್ಮಾ ನಾನು ವ್ಯಕ್ತಿಯ ಮೇಲೆ ಹಲ್ಲೆ ಮಾಡಿಲ್ಲ. ಪಾಕಿಸ್ತಾನ ಪರ ಘೋಷಣೆಯನ್ನು ಕೂಗುತ್ತಿದ್ದ ವ್ಯಕ್ತಿ ಕೆಳಗೆ ಬೀಳುತ್ತಿದ್ದರಿಂದ ಹಿಡಿದುಕೊಳ್ಳಲು ಯತ್ನಿಸಿದ್ದೆ ಎಂದಿದ್ದಾರೆ.