ಚಂಡೀಗಢ/ರೋಹ್ತಕ್: ಜಾಟ್ ಸಮುದಾಯದ ಸದಸ್ಯರು ಕಳೆದ ಆರು ದಿನಗಳಿಂದ ಮೀಸಲಾತಿಗಾಗಿ ಆಗ್ರಹಿಸಿ ಹರಿಯಾಣದಲ್ಲಿ ನಡೆಸುತ್ತಿರುವ ಚಳವಳಿ ಹಿಂಸೆಗೆ ತಿರುಗಿದ್ದು, ಪೊಲೀಸರ ಗುಂಡೇಟಿಗೆ ಓರ್ವ ಬಲಿಯಾಗಿದ್ದಾರೆ.
ರೋಹ್ತಕ್ನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯ ಆವರಣದಲ್ಲಿ ಜಾಟ್ ಪ್ರತಿಭಟನಕಾರರು ಉಗ್ರಪ್ರತಿಭಟನೆ ನಡೆಸುತ್ತಿದ್ದು ಹರಿಯಾಣ ಸಚಿವ ಕ್ಯಾಪ್ಟನ್ ಅಭಿಮನ್ಯು ಮನೆಗೆ ಬೆಂಕಿ ಕೂಡಾ ಹಚ್ಚಿದ್ದಾರೆ. ಅಲ್ಲದೆ ರೋಹ್ತಕ್ನಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಕಚೇರಿ ಮೇಲೆ ಸುಮಾರು 5000 ಮಂದಿಯ ಗುಂಪು ಕಲ್ಲುಗಳನ್ನು ತೂರಿದ್ದಾರೆ. ಐಜಿಪಿ ಕಚೇರಿ ಗೇಟ್, ಪೊಲೀಸ್ ಜೀಪ್ಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಗಳು ತಿಳಿಸಿವೆ.
ಉದ್ರಿಕ್ತ ಗುಂಪನ್ನು ಚದುರಿಸುವ ಸಲುವಾಗಿ ಐಜಿಪಿ ಕಚೇರಿಯ ಒಳಗಿನಿಂದ ಪೊಲೀಸರು ಗುಂಡು ಹಾರಿಸಿದ್ದು, ಪೊಲೀಸರ ಗುಂಡೇಟಿಗೆ ಓರ್ವ ಬಲಿಯಾಗಿ, ಇತರ 6 ಮಂದಿ ಗಾಯಗೊಂಡಿದ್ದಾರೆ.
ಜಾಟ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸುವ ಪ್ರಸ್ತಾಪವನ್ನು ಜಾಟ್ ಸಮುದಾಯ ತಿರಸ್ಕರಿಸಿತ್ತು. ಜಾಟ್ ಪ್ರತಿಭಟನೆಯನ್ನು ನಿಯಂತ್ರಿಸುವ ಸಲುವಾಗಿ ಸರ್ಕಾರ ಇಂಟರ್ನೆಟ್ ಹಾಗೂ ಎಸ್ಎಂಎಸ್ ಸೇವೆಗಳನ್ನು ಸ್ಥಗಿತಗೊಳಿಸಿತ್ತು. ಪ್ರತಿಭಟನೆಯಿಂದಾಗಿ ರಸ್ತೆ ಮತ್ತು ರೈಲು ಸಂಚಾರವೂ ಅಸ್ತವ್ಯಸ್ತಗೊಂಡಿದೆ.
Advertisement