ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿ ಹೆಸರಿನಲ್ಲಿ ನಕಲಿ ವೆಬ್ ಸೈಟ್ ಮೂಲಕ ಹಲವರನ್ನು ವಂಚಿಸಿದ್ದ ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆಯ ಟಿಕೆಟ್ ಪರೀಕ್ಷಕರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಸಿಬಿಐ ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರೈಲ್ವೆ ಇಲಾಖೆಯ ನಾಲ್ವರು ಟಿಕೆಟ್ ಪರೀಕ್ಷಕರ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದು ಪ್ರಕರಣದ ಪ್ರಮುಖ ಆರೋಪಿ ಶ್ರೀನಾಥ್ ಕಾಣೆಯಾಗಿದ್ದಾನೆ. ರೈಲ್ವೆ ನೇಮಕಾತಿ ಮಂಡಳಿ ಹೆಸರಿನ ನಕಲಿ ವೆಬ್ ಸೈಟ್ ನ ಏಜೆಂಟ್ ಗಳ ಮೂಲಕ ರೈಲ್ವೆ ಇಲಾಖೆ ನೌಕರಿಯನ್ನು ಪಡೆಯಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ಎದುರಿಸುವಂತೆ ಸೂಚಿಸಲಾಗಿತ್ತು. ನೌಕರಿ ಖಾತ್ರಿಗೊಳಿಸುವುದಕ್ಕೆ ಅಭ್ಯರ್ಥಿಗಳಿಂದ ಭಾರಿ ಮೊತ್ತದ ಹಣ ಪಡೆಯಲಾಗಿತ್ತು. ನಂತರ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿ ಸಂದರ್ಶನವನ್ನು ನಡೆಸಿ ಅವರಿಗೆ ನೇಮಕಾತಿ ಪತ್ರವನ್ನೂ ನೀಡಲಾಗಿತ್ತು. ಆದರೆ ಆ ನೇಮಕಾತಿ ಪತ್ರಗಳು ನಕಲಿ ಎಂಬುದು ಈಗ ಬಹಿರಂಗವಾಗಿದೆ.
ಮೈಸೂರಿನ ಶ್ರೀನಾಥ್, ಎಂ ರಘು, ಆರ್ ಪ್ರದೀಪ್ ಕುಮಾರ್ ಹಾಗೂ ಹುಬ್ಬಳ್ಳಿಯ ಹನುಮಂತಪ್ಪ ನಕಲಿ ನೇಮಕಾತಿ ಹಗರಣದ ನಾಲ್ವರು ಆರೋಪಿಗಳಾಗಿದ್ದಾರೆ. ಈ ಹಗರಣದಲ್ಲಿ ಇನ್ನೂ ಹಲವು ರೈಲ್ವೆ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಬೆಂಗಳೂರು ವಿಭಾಗದ ಸಿಬಿಐ ನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಶಂಕಿಸಿದ್ದಾರೆ.
ವಂಚನೆಗೊಳಗಾದವರಿಂಡ ಹೇಳಿಕೆ ಪಡೆದಿರುವ ಸಿಬಿಐ, ಈ ಬಗ್ಗೆ ಮತ್ತಷ್ಟು ಸಾಕ್ಷ್ಯಾಧಾರ ಕಳೆಹಾಕುತ್ತಿದೆ. ವಂಚನೆಗೊಳಗಾದವರ ಸಂಖ್ಯೆ ಹಾಗೂ ಅಭ್ಯರ್ಥಿಗಳಿಂದ ಪಡೆದ ಒಟ್ಟು ಮೊತ್ತ ಎಷ್ಟು ಎಂದು ಈ ವರೆಗೂ ನಿಖರವಾಗಿ ತಿಳಿದುಬಂದಿಲ್ಲ.
Advertisement