ಲಾತೂರ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ಶಿವಾಜಿ ಜಯಂತಿ ಆಚರಣೆಯ ವೇಳೆ ಬಲಪಂಥೀಯ ಕಾರ್ಯಕರ್ತರು ಮುಸ್ಲಿಂ ಪೊಲೀಸ್ ಆಫೀಸರ್ ಕೈಯಲ್ಲಿ ಕೇಸರಿ ಧ್ವಜ ಕೊಟ್ಟು ಜೈಕಾರ ಕೂಗುವಂತೆ ಒತ್ತಾಯಿಸಿರುವ ಘಟನೆ ವರದಿಯಾಗಿದೆ.
ಇಲ್ಲಿನ ವಿವಾದಿತ ಪ್ರದೇಶವಾದ ಪನ್ಗಾಂವ್ ಗ್ರಾಮದಲ್ಲಿ ಧ್ವಜ ಹಾರಿಸುವಂತಿಲ್ಲ ಎಂದು ಬಲಪಂಥೀಯ ಕಾರ್ಯಕರ್ತರನ್ನು ತಡೆದುದಕ್ಕಾಗಿ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಯೂನಸ್ ಶೇಖ್ (57) ಮತ್ತು ಆತನ ಸಹೋದ್ಯೋಗಿ ಕೆ. ಅವಾಸ್ಕರ್ ಮೇಲೆ ಗೂಂಡಾಗಳು ಹಲ್ಲೆ ನಡೆಸಿದ್ದಾರೆ.
ಫೆ. 19ರಂದು ರಾತ್ರಿ ವಿವಾದಿತ ಪ್ರದೇಶವಾದ ಪನ್ಗಾಂವ್ನಲ್ಲಿ ಧ್ವಜ ಆರೋಹಣ ಮಾಡುವಂತಿಲ್ಲ ಎಂದು ಪೊಲೀಸರು ಆದೇಶಿಸಿದ್ದರು. ಈ ಹಿಂದೆಯೇ ಕೋಮುಗಲಭೆ ನಡೆದಿರುವ ಪ್ರದೇಶ ಇದಾಗಿರುವುದರಿಂದ ಅಲ್ಲಿ ಧ್ವಜಾರೋಹಣಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದರು. ಬಲಪಂಥೀಯ ಕಾರ್ಯಕರ್ತರ ಗುಂಪೊಂದು ಅಲ್ಲಿ ಧ್ವಜಾರೋಹಣ ಮಾಡಲು ಬಂದಾಗ ಶೇಖ್ ಮತ್ತು ಅವಾಸ್ಕರ್ ಅವರನ್ನು ತಡೆದಿದ್ದರು. ಇದರಿಂದ ರೊಚ್ಚಿಗೆದ್ದ ಗುಂಪು ಪೊಲೀಸರ ಮೇಲೆ ಹಲ್ಲೆ ನಡೆಸಿತ್ತು.
ಪನ್ಗಾಂವ್ವಲ್ಲಿ ಮರಾಠ, ದಲಿತ, ರೆಡ್ಡಿ ಮತ್ತು ಮುಸ್ಲಿಮರು ಸೇರಿದಂತೆ 12,000 ದಷ್ಟು ಜನಸಂಖ್ಯೆ ಇದೆ.
ಧ್ವಜ ಹಾರಾಟಕ್ಕೆ ತಡೆದುದನ್ನು ಪ್ರಶ್ನಿಸಿ ಶನಿವಾರ ಬೆಳಗ್ಗೆ ಆ ಗ್ರಾಮದ ಸುಮಾರು 200-300 ಮಂದಿ ಪೊಲೀಸರ ಚೌಕಿಗೆ ಬಂದು ದಾಂಧಲೆ ನಡೆಸಿದ್ದಾರೆ. ಈ ಇಬ್ಬರು ಪೊಲೀಸರು ತಮ್ಮ ಧ್ವಜವನ್ನು ಕಾಲಿನಿಂದ ಹೊಸಕಿ ಹಾಕಿದ್ದಾರೆ ಎಂದು ಹೇಳಿ ಗುಂಪು ಹಲ್ಲೆ ನಡೆಸಿತ್ತು.
ಪೊಲೀಸರ ಮೇಲೆ ಯುವಕರು ಲಾಠಿಯಿಂದ ಹಲ್ಲೆ ನಡೆಸಿದ್ದು ಶೇಖ್ ಅವರಿಗೆ ಗಂಭೀರ ಗಾಯಗಳಾಗಿವೆ.
ಅದೇ ವೇಳೆ ಕೇಸರಿ ಧ್ವಜ ಕೈಯಲ್ಲಿ ಕೊಟ್ಟು ಶೇಖ್ ಅವರನ್ನು ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಹೇಳಿ ಜೈ ಭವಾನಿ ಎಂದು ಜೈಕಾರ ಕೂಗುವಂತೆ ಒತ್ತಾಯಿಸಲಾಗಿದೆ. ಪೊಲೀಸರನ್ನು ಈ ರೀತಿ ಮೆರವಣಿಗೆ ನಡೆಸುವ ವೀಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ 17 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.