ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧ ಕೋರ್ಟ್ ನಿಂದ ಸಮನ್ಸ್ ಪಡೆದಿದ್ದ ಇಲಾಖೆಯ ಮಾಜಿ ರಾಜ್ಯ ಸಚಿವ ದಿಲೀಪ್ ರೇ ಅವರಿಗೆ ನವದೆಹಲಿಯ ವಿಶೇಷ ನ್ಯಾಯಾಲಯ ಜಾಮೀನು ನೀಡಿದೆ.
ಈ ಹಿಂದಿನ ಎನ್ ಡಿ ಎ ಸರ್ಕಾರದಲ್ಲಿ ಕಲ್ಲಿದ್ದಲು ಖಾತೆ ರಾಜ್ಯ ಸಚಿವರಾಗಿದ್ದ ದಿಲೀಪ್ ರೇ ಹಾಗೂ ಇತರ ಐವರ ವಿರುದ್ಧ ಸಿಬಿಐ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ದಿಲೀಪ್ ರೇ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರಾಗಿದ್ದರು. ಒಂದು ಲಕ್ಷ ರೂ ಬಾಂಡ್ ನೀಡುವಂತೆ ನ್ಯಾಯಾಲಯ ದಿಲೀಪ್ ರೇ ಗೆ ಸೂಚಿಸಿದೆ.
ದಿಲೀಪ್ ರೇ ಅವರೊಂದಿಗೆ ಕಲ್ಲಿದ್ದಲು ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ ಗೌತಮ್, ಕ್ಯಾಸ್ಟ್ರೋನ್ ಟೆಕ್ನಾಲಜೀಸ್ ಲಿಮಿಟೆಡ್ ನ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್ವಾಲ್ ಅವರಿಗೂ ಜಾಮೀನು ದೊರೆತಿದೆ.
ಜಾಮೀನು ದಾಖಲೆಗಳ ಪರೀಶೀಲನೆಗಾಗಿ ಸಿಬಿಐ ವಿಶೆಷ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಏ.1 ಕ್ಕೆ ನಿಗದಿಪಡಿಸಿದೆ. ಜಾರ್ಖಂಡ್ನ ಬ್ರಹ್ಮಾದಿಯಾ ನಿಕ್ಷೇಪ ಹಂಚಿಕೆಯಲ್ಲಿ ಅವ್ಯವಹಾರ ನಡೆದಿರುವ ಪ್ರಕರಣದಲ್ಲಿ ದಿಲೀಪ್ ರೇ ಅವರನ್ನು ನ್ಯಾಯಾಲಯ ಪ್ರಮುಖ ಆರೋಪಿಯನ್ನಾಗಿ ಪರಿಗಣಿಸಿ ಜ.18 ರಂದು ಸಮನ್ಸ್ ಜಾರಿ ಮಾಡಿತ್ತು.
Advertisement