ನವದೆಹಲಿ: ಸಮ-ಬೆಸ ನಿಯಮಕ್ಕೆ ಸಂಬಂಧಿಸಿದ ದೆಹಲಿ ಸರ್ಕಾರದ ಹೊಸ ಜಾಹೀರಾತಿನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 'ಮಫ್ಲರ್ ಮ್ಯಾನ್' ವೇಶದಲ್ಲಿ ಕಾಣಿಸಿಕೊಂಡಿದ್ದು, ಇದಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಮತ್ತು 'ಕಾನೂನು ಚೈತನ್ಯ'ವನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್, ಬಿಜೆಪಿ ಆರೋಪಿಸಿವೆ.
ಇಂತಹ ಜಾಹೀರಾತು ನೀಡುವ ಮೂಲಕ ಆಮ್ ಆದ್ಮಿ ಪಕ್ಷ ಕೀಳು ಮಟ್ಟದ ರಾಜಕೀಯ ಮಾಡುತ್ತಿದೆ ಎಂದು ದೆಹಲಿ ವಿಧಾನಸಭೆ ಪ್ರತಿಪಕ್ಷ ನಾಯಕ ವಿಜೇಂದ್ರ ಗುಪ್ತಾ ಅವರು ಆರೋಪಿಸಿದ್ದಾರೆ.
ಇನ್ನು ಮಫ್ಲರ್ ಮ್ಯಾನ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ವಕ್ತಾರ ಶರ್ಮಿಷ್ಟ ಮುಖರ್ಜಿ ಅವರು, ಕಾನೂನು ಮತ್ತು ಸಂಸ್ಥೆಗಳಿಗೆ ಅವಮಾನ ಮಾಡಲಾಗಿದೆ ಎಂದಿದ್ದಾರೆ.
ಸಮ-ಬೆಸ ನಿಯಮಕ್ಕೆ ಸಂಬಂಧಿಸಿದ 1 ನಿಮಿಷ 32 ಸೆಕೆಂಡ್ಗಳ ಜಾಹೀರಾತಿನಲ್ಲಿ ಕೇಜ್ರಿವಾಲ್ ಅವರು ಕ್ಯಾಮೆರಾಗೆ ಬೆನ್ನು ಮಾಡಿದ್ದು, ಕುತ್ತಿಗೆ ಹಾಗೂ ಮುಖದ ಸುತ್ತ ಮಫ್ಲರ್ ಸುತ್ತಿಕೊಂಡಿದ್ದು, ಪೊಲೀಸ್ ಹಾಗೂ ಸ್ವಯಂ ಸೇವಕರ ಪ್ರಯತ್ನಗಳನ್ನು ಹೊಗಳಿದ್ದಾರೆ.