ನವದೆಹಲಿ: ಪಠಾಣ್ ಕೋಟ್ ವಾಯು ನೆಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಪರಿಣಾಮ ಜ.15 ರಂದು ನಡೆಯಬೇಕಿದ್ದ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆಗೆ ಅನಿಶ್ಚಿತತೆ ಮುಂದುವರೆದಿರುವುದು ಒಂದೆಡೆಯಾದರೆ, ಮತ್ತೊಂದೆಡೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಾಸಿರ್ ಖಾನ್ ಅವರನ್ನು ಗೌಪ್ಯವಾಗಿ ಭೇಟಿ ಮಾಡಲಿದ್ದಾರೆ ಎಂಬ ವರದಿಗಳಾಗಿವೆ.
ಎನ್ ಡಿ ಟಿವಿ ವರದಿ ಪ್ರಕಾರ, ವಿದೇಶದಲ್ಲಿ ಉಭಯ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಗೌಪ್ಯ ಮಾತುಕತೆ ನಡೆಸಲಿದ್ದಾರೆ. ಪಠಾಣ್ ಕೋಟ್ ದಾಳಿ ರುವಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಪಾಕಿಸ್ತಾನ ಮಿಶ್ರ ಪ್ರತಿಕ್ರಿಯೆ ನೀಡುತ್ತಿರುವ ಹಿನ್ನೆಲೆಯಲ್ಲಿ ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ನಾಸಿರ್ ಖಾನ್ ಅವರನ್ನು ಗೌಪ್ಯವಾಗಿ ಭೇಟಿ ಮಾಡಲು ಅಜಿತ್ ದೋವಲ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇಷ್ಟು ದಿನ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದ ಪಾಕಿಸ್ತಾನ, ಈಗ ಭಯೋತ್ಪಾದಕರು ದಾಳಿಗೂ ಮುನ್ನ ಕರೆ ಮಾಡಿರುವ ನಂಬರ್ ಗಳು ತನ್ನ ದೇಶದಲ್ಲಿ ನೋಂದಣಿಯಾಗಿಲ್ಲ ಎಂದು ಹೇಳಿರುವುದನ್ನು ಎನ್ ಡಿಟಿವಿ ವರದಿ ಮಾಡಿದೆ. ಪಠಾಣ್ ಕೋಟ್ ವಾಯು ನೆಲೆ ದಾಳಿಯ ಪ್ರಕರಣದ ತನಿಖೆ ಬಗ್ಗೆ ಚರ್ಚಿಸಲು ನಾಸಿರ್ ಖಾನ್ ಅವರನ್ನು ಅಜಿತ್ ದೋವಲ್ ಭೇಟಿ ಮಾಡಲಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
Advertisement