
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕ್ಷೇತ್ರ ವಾರಣಾಸಿಯಲ್ಲಿರುವ ಗಂಗಾ ನದಿ ನೀರನ್ನು ಶುದ್ಧೀಕರಿಸುವ ಯೋಜನೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದೇಶದ ಅತ್ಯುನ್ನತ ಪರಿಸರ ನ್ಯಾಯಾಲಯವಾದ ರಾಷ್ಟ್ರೀಯ ಹಸಿರು ಪ್ರಾಧಿಕಾರ ಛೀಮಾರಿ ಹಾಕಿದೆ.
ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರಗಳನ್ನು ಖಂಡಿಸಿರುವ ನ್ಯಾಯಾಲಯ ನಿಮ್ಮ ಘೋಷಣೆಗಳು ನಿಮ್ಮ ಕಾರ್ಯಗಳಿಗೆ ಸಂಪೂರ್ಣ ವಿರುದ್ಧವಾಗಿವೆ. ವಾರಣಾಸಿ ಬಳಿ ಇರುವ ನದಿಯಲ್ಲಿ ಶವಗಳ ದೇಹಗಳು ತೇಲುತ್ತಿರುವ ಫೋಟೋವನ್ನು ನ್ಯಾಯಾಧೀಶರ ಮುಂದೆ ವಕೀಲರೊಬ್ಬರು ಪ್ರದರ್ಶಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗಂಗಾ ನದಿಗೆ ಮಾನವರ ಮತ್ತು ಇತರೆ ಪ್ರಾಣಿಗಳ ಮೃತದೇಹಗಳನ್ನು ಬಿಸಾಕುವುದನ್ನು ನಿಲ್ಲಿಸಲು ಸರ್ಕಾರಗಳು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಗಂಗಾ ನದಿ ನೀರು ಇಷ್ಟು ಮಲಿನವಾಗುವುದಕ್ಕೆ ಯಾರು ಕಾರಣವೆಂದು ಜನವರಿ 27ರೊಳಗೆ ಉತ್ತರ ನೀಡಬೇಕೆಂದು ರಾಷ್ಟ್ರೀಯ ಹಸಿರು ಪ್ರಾಧಿಕಾರ ಆದೇಶ ನೀಡಿದೆ.
ಸ್ಥಳೀಯ ಅಧಿಕಾರಿಗಳು ಮಾಲಿನ್ಯಕ್ಕೆ ಕಾರಣ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಿದ ಕಾರಣವನ್ನು ನ್ಯಾಯಾಲಯ ತಿರಸ್ಕರಿಸಿದೆ. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿದ ಮೇಲಾದರೂ ನದಿಯ ಯಾವುದಾದರೊಂದು ಭಾಗದಲ್ಲಿ ಪರಿಸ್ಥಿತಿ ಸುಧಾರಿಸಿದ್ದನ್ನು ತಿಳಿಸಿ ಎಂದು ಪ್ರಾಧಿಕಾರ ಹೇಳಿದೆ.ಹಿಮಾಲಯದಿಂದ ಬಂಗಾಳಕೊಲ್ಲಿಯವರೆಗೆ 1600 ಮೈಲು ಉದ್ದದ ಗಂಗಾ ನದಿಗೆ ನಿತ್ಯವೂ ಕೈಗಾರಿಕಾ ತ್ಯಾಜ್ಯ, ಸಂಸ್ಕರಿಸದ ಚರಂಡಿ ನೀರು ಹರಿದು ಸೇರುತ್ತಿವೆ. ನದಿಯ ದಡದ ಸುತ್ತಲೂ ಕಸಗಳಿಂದ ತುಂಬಿವೆ. ಪ್ರಧಾನ ಮಂತ್ರಿ ಮೋದಿಯವರು 2014ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ, ತಾವು ಗೆದ್ದು ಬಂದರೆ ಗಂಗಾ ನದಿ ಶುದ್ಧೀಕರಣ ಮತ್ತು 3 ಸಾವಿರ ವರ್ಷಗಳ ಹಳೆಯದಾದ ವಾರಣಾಸಿ ನಗರವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಸ್ವ ಆಸಕ್ತಿಯಿಂದ ಕೈಗೆತ್ತಿಕೊಳ್ಳುವುದಾಗಿ ಹೇಳಿದ್ದರು.
ಗಂಗಾ ನದಿ ಸ್ವಚ್ಛತೆ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ 2014ರಲ್ಲಿ ಯೋಜನೆ ಸಂಪೂರ್ಣ ಕಾರ್ಯರೂಪಕ್ಕೆ ಬರಲು ಸುಮಾರು 200 ವರ್ಷಗಳೇ ಬೇಕಾಗಬಹುದು ಎಂದು ಹೇಳಿತ್ತು. ಗಂಗಾ ನದಿ ತೀರದಲ್ಲಿರುವ ನೀರನ್ನು ಮಲಿನ ಮಾಡುವ ಕೈಗಾರಿಕೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ರಾಷ್ಟ್ರೀಯ ಹಸಿರು ಪ್ರಾಧಿಕಾರಕ್ಕೆ ಸೂಚಿಸಿತ್ತು.
ಗಂಗಾ ನದಿ ನೀರನ್ನು ಹಲವು ಕ್ರಮಗಳ ಮೂಲಕ ಐಐಟಿ ತಜ್ಞರನ್ನು ಸೇರಿಸಿ, ಜನ ಚಳವಳಿ ಆರಂಭಿಸಿ ಸ್ವಚ್ಛಗೊಳಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಭರವಸೆ ನೀಡಿತ್ತು.
Advertisement