ಹೈದರಾಬಾದ್ ವಿವಿಯಲ್ಲಿ ಪ್ರತಿಭಟನೆ: ಪ್ರಜಾಪ್ರಭುತ್ವದ ತತ್ವ ಪಾಲಿಸದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸ್ವಾಮಿ ಆಗ್ರಹ
ನವದೆಹಲಿ: ಹೈದರಾಬಾದ್ ವಿಶ್ವವಿದ್ಯಾನಿಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣವನ್ನಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಪ್ರಜಾಪ್ರಭುತ್ವದ ತತ್ವಗಳನ್ನು ಪಾಲಿಸುತ್ತಿಲ್ಲವಾದ್ದರಿಂದ ಅವರ ವಿರುದ್ಧ ವಿಶ್ವ ವಿದ್ಯಾನಿಲಯ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
ವಿಶ್ವವಿದ್ಯಾನಿಲಯ ಇರುವುದು ಅಧ್ಯಯನಕ್ಕಾಗಿ, ಬಿಡುವಿನ ಸಮಯದಲ್ಲಿ ಪ್ರತಿಭಟನೆ ನಡೆಸಬಹುದು, ಆದರೆ ಅಧ್ಯಯನದಲ್ಲಿ ಆಸಕ್ತಿಯೇ ಇಲ್ಲದ ವಿದ್ಯಾರ್ಥಿಗಳು ಬೇರೆಡೆಗೆ ಹೋಗಬಹುದು, ತರಗತಿಗಳಿಗೆ ಹಾಜರಾಗಲು ಇಷ್ಟವಿಲ್ಲದವರನ್ನು ವಿಶ್ವವಿದ್ಯಾನಿಲಯದಿಂದ ಹೊರಹಾಕಬೇಕು ಎಂದು ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ನತದೃಷ್ಟ ವಿದ್ಯಾರ್ಥಿಯನ್ನು ಹಾಸ್ಟೆಲ್ ನಿಂದ ಹೊರಹಾಕಲಾಗಿತ್ತು ಆದರೆ ತರಗತಿಗಳಿಗೆ ಹಾಜರಾಗುವುದು, ಗ್ರಂಥಾಲಯಕ್ಕೆ ಪ್ರವೇಶಿಸುವುದರಿಂದ ಅಮಾನತುಗೊಳಿಸಲಾಗಿರಲಿಲ್ಲ. ಅಮಾನತು ಮಾಡುವುದೆಂದರೆ ಉಚ್ಚಾಟನೆ ಅಲ್ಲ ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದಾರೆ.
ವಿಶ್ವವಿದ್ಯಾನಿಳಯದಲ್ಲಿರುವ ದೇಶವಿರೋಧಿ ಪಡೆಗಳನ್ನು ಗುರುತಿಸಬೇಕು, ಪ್ರಜಾಪ್ರಭುತ್ವದ ತತ್ವಗಳನ್ನು ಪಾಲಿಸದ ವಿದ್ಯಾರ್ಥಿಗಳ ವಿರುದ್ಧ ವಿಶ್ವವಿದ್ಯಾನಿಲಯ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸುಬ್ರಹ್ಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.