ಇರಾಕ್, ಸಿರಿಯಾ ಮಾದರಿಯ ಹಿಂಸಾಚಾರ ನಡೆಸಿ ಭಾರತ ಸರ್ಕಾರದ ಪತನಕ್ಕೆ ಸಂಚು ರೂಪಿಸಿದ್ದ ಇಸೀಸ್ ಉಗ್ರರು!

ಗಣರಾಜ್ಯೋತ್ಸವದ ದಿನದಂದು ಭಾರಿ ವಿಧ್ವಂಸಕ ಕೃತ್ಯ ನಡೆಸುವ ಮೂಲಕ ಕೇಂದ್ರ ಸರ್ಕಾರವನ್ನು ಪತನಗೊಳಿಸಲು ಉಗ್ರರು ಯೋಜನೆ ರೂಪಿಸಿದ್ದರು.
ಇಸೀಸ್ ಉಗ್ರ ಸಂಘಟನೆ (ಸಂಗ್ರಹ ಚಿತ್ರ)
ಇಸೀಸ್ ಉಗ್ರ ಸಂಘಟನೆ (ಸಂಗ್ರಹ ಚಿತ್ರ)

ನವದೆಹಲಿ: ಭಾರತದಲ್ಲಿ ಇಸೀಸ್ ಉಗ್ರ ಸಂಘಟನೆ ಆಳವಾಗಿ ಬೇರೂರಿರುವ ಸಾಧ್ಯತೆಗಳು ದಟ್ಟವಾಗಿರುವ ಶಂಕೆ ವ್ಯಕ್ತವಾಗಿದೆ. ಗಣರಾಜ್ಯೋತ್ಸವದ ದಿನದಂದು ಭಾರಿ ವಿಧ್ವಂಸಕ ಕೃತ್ಯ ನಡೆಸುವ ಮೂಲಕ ಕೇಂದ್ರ ಸರ್ಕಾರವನ್ನು ಪತನಗೊಳಿಸಲು ಉಗ್ರರು ಯೋಜನೆ ರೂಪಿಸಿದ್ದರು ಎಂಬ ಆಘಾತಕಾರಿ ಅಂಶವನ್ನು ಬಂಧಿತ ಶಂಕಿತ ಉಗ್ರರು ಎನ್ಐಎ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ.

ಕೇಂದ್ರ ಸರ್ಕಾರವನ್ನು ಪತನಗೊಳಿಸಿದ ನಂತರ ದೆಹಲಿಯಲ್ಲಿ ಷರಿಯಾ ಕಾನೂನು ಹೇರುವ ಮೂಲಕ ಇಸ್ಲಾಮಿಕ್ ಆಡಳಿತ ಜಾರಿಗೆ ತರುವುದು ಉಗ್ರರ ಗುರಿಯಾಗಿತ್ತು ಎಂಬುದು ಎನ್ಐಎ ತನಿಖೆ ವೇಳೆ ಬಯಲಾಗಿದೆ. ಇರಾಕ್ ಹಾಗೂ ಸಿರಿಯಾದಲ್ಲಿ ಇಸೀಸ್ ಉಗ್ರ ಸಂಘಟನೆ ನಡೆಸುತ್ತಿರುವ ಮಾದರಿಯಲ್ಲೇ ಭಾರತದಲ್ಲೂ ಹಿಂಸಾಚಾರ ನಡೆಸಿ ಸರ್ಕಾರವನ್ನು ಪತನಗೊಳಿಸುವುದು ಉಗ್ರರ ಮುಖ್ಯ ಉದ್ದೇಶವಾಗಿತ್ತು.  
 
ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಪಾಲಿಸದ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಷರಿಯಾ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ವಿಚಾರಣೆ ವೇಳೆ ಉಗ್ರರು ಹೇಳಿಕೊಂಡಿದ್ದಾರೆ. ದೇಶಾದ್ಯಂತ ದುಷ್ಕೃತ್ಯಗಳನ್ನು ಎಸಗಲು ಭಾರಿ ಪ್ರಮಾಣದ ಸೋಟಕ ಹಾಗೂ ಶಸ್ತ್ರಾಸ್ತ್ರಗಳನ್ನು ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸಿರಿಯಾ ಹಾಗೂ ಇರಾಕ್‌ನಲ್ಲಿರುವ ಐಸಿಸ್‌ನ ಪ್ರಮುಖ ಉಗ್ರರೊಂದಿಗೆ ಬಂಧಿತರು ಸತತ ಸಂಪರ್ಕದಲ್ಲಿದ್ದರು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಇಸೀಸ್ ನೊಂದಿಗೆ ಸಂಪರ್ಕ ಹೊಂದಿದ್ದ 14ಕ್ಕೂ ಹೆಚ್ಚು ಶಂಕಿತರನ್ನು ಇತ್ತೀಚೆಗೆ ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com