ತಿರುವನಂತಪುರ: ಸೋಲಾರ ಹಗರಣ ಸಂಬಂಧ ಕೇರಳ ಮುಖ್ಯಮಂತ್ರಿ ಉಮನ್ ಚಾಂಡಿ ಹಾಗೂ ಅವರ ಸಂಪುಟದ ಸಚಿವರ ವಿರುದ್ಧ ಎಫ್ಐಆರ್ಗೆ ಆದೇಶಿಸಿದ್ದ ತ್ರಿಶ್ಯೂರ್ ವಿಚಕ್ಷಣ ಕೋರ್ಟ್ ನ್ಯಾಯಾಧೀಶ ಎಸ್ಎಸ್ ವಾಸನ್ ಅವರು ಶುಕ್ರವಾರ ಸ್ವಯಂ ನಿವೃತ್ತಿ ಕೋರಿದ್ದಾರೆ.
ವಿಚಕ್ಷಣ ನ್ಯಾಯಾಲಯದ ಆದೇಶಕ್ಕೆ ಕೇರಳ ಹೈಕೋರ್ಟ್ ತಡೆ ನೀಡಿದ ಕೆಲವೇ ಕ್ಷಣಗಳಲ್ಲಿ ತನಿಖಾ ಆಯೋಗದ ಮುಖ್ಯಸ್ಥ ಹಾಗೂ ತ್ರಿಶ್ಯೂರ್ ವಿಶೇಷ ಕೋರ್ಟ್ನ ನ್ಯಾಯಾಧೀಶ ವಾಸನ್ ಅವರು ಸ್ವಯಂ ನಿವೃತ್ತಿಯ ನಿರ್ಧಾರ ಪ್ರಕಟಿಸಿದ್ದಾರೆ.
ವಿಚಕ್ಷಣ ನ್ಯಾಯಾಲಯದ ಆದೇಶ ಪ್ರಶ್ನಿಸಿ ಚಾಂಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಪಿ.ಉಬೈದ್ ಅವರು, ಸಿಎಂ ಹಾಗೂ ಅವರ ಸಂಪುಟದ ಸಹೋದ್ಯೋಗಿ ವಿದ್ಯುತ್ ಸಚಿವ ಆರ್ಯಾಡನ್ ಮೊಹಮ್ಮದ್ ವಿರುದ್ಧ ಎಫ್ಐಆರ್ಗೆ ಆದೇಶಿಸಿದ್ದ ವಿಚಾರಣಾ ಕೋರ್ಟ್ನ ಆದೇಶಕ್ಕೆ ತಡೆ ನೀಡಿದ್ದರು.
ಮಾಧ್ಯಮಗಳ ವರದಿಯ ಪ್ರಕಾರ, ವಿಚಕ್ಷಣ ಕೋರ್ಟ್ನ್ನು ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಮೂರ್ತಿ ಉಬೈದ್ ಅವರು, ವಿಚಕ್ಷಣ ಕೋರ್ಟ್ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.