ನವದೆಹಲಿ: ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿ ರೋಹಿತ್ ವೆಮುಲಾ ಅವರ ಸಾವಿಗೆ ರಾಜಕೀಯ ಬಣ್ಣ ನೀಡುವುದನ್ನು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮೊದಲು ನಿಲ್ಲಿಸಬೇಕೆಂದು ಬಿಜೆಪಿ ಶನಿವಾರ ಹೇಳಿದೆ.
ದಲಿತ ವಿದ್ಯಾರ್ಥಿ ಸಾವನ್ನು ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗಳಿಗೆ ರಾಹುಲ್ ಗಾಂಧಿಯವರು ಕೈ ಜೋಡಿಸುವುದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು, ದಲಿತ ವಿದ್ಯಾರ್ಥಿ ಸಾವು ಪ್ರಕರಣವನ್ನು ರಾಹುಲ್ ಗಾಂಧಿಯವರು ರಾಜಕೀಯ ಬಣ್ಣಕ್ಕೆ ತಿರುಗಿಸಲು ಯತ್ನ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿಯವರು ಸತ್ತ ವ್ಯಕ್ತಿಯನ್ನಿಡಿದು ರಾಜಕೀಯವಾಟವಾಗಡುವ ಬದಲು ಧನಾತ್ಮಕವಾಗಿ ಕೆಲಸ ಮಾಡಲಿ ಎಂದು ಹೇಳಿದ್ದಾರೆ. ದೇಶದಲ್ಲಿ ಕಾನೂನು, ನ್ಯಾಯಾಲಯ ತಮ್ಮ ಕೆಲಸವನ್ನು ಮಾಡುತ್ತಿರುವಾಗ ರಾಹುಲ್ ಗಾಂಧಿಯವರೇಕೆ ನ್ಯಾಯಾಧೀಶರಂತೆ ವರ್ತಿಸುತ್ತಿದ್ದಾರೆ. ವಿದ್ಯಾರ್ಥಿ ಸಾವು ದಲಿತ-ದಲಿತರಲ್ಲದ ವಿಚಾರವಲ್ಲ.
ರಾಹುಲ್ ಗಾಂಧಿಯವರು ಯಾವ ರೀತಿಯ ರಾಜಕೀಯ ಆಟ ಆಡುತ್ತಿದ್ದಾರೆಂಬುದಕ್ಕೆ ಇದೊಂದು ಉತ್ತಮ ಉದಾಹರಣ ಘಟನೆಯಾಗಿದೆ. ರಾಹುಲ್ ಗಾಂಧಿಯವರು ಬೆಂಬಲ ನೀಡುವುದರಲ್ಲಿ ಸಾಕಷ್ಟು ಆಯ್ಕೆಯ ವ್ಯಕ್ತಿಯಾಗಿದ್ದು, ಪಶ್ಚಿಮ ಬಂಗಾಳದ ಮಲ್ದಾದಲ್ಲಿರುವ ಪರಿಸ್ಥಿತಿ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಮಲ್ಡಾದಲ್ಲಿ ಕೋಮುಗಲಭೆ ಘಟನೆ ನಡೆದಿತ್ತು. ಆದರೆ, ಮಾಲ್ಡಾಗೆ ಎಂದಾದರೂ ರಾಹುಲ್ ಭೇಟಿ ನೀಡಿದ್ದರೇ?...ಫೋಟೋ ಹಾಗೂ ಪ್ರಚಾರಕ್ಕಾಗಿ ಇದೀಗ ರಾಹುಲ್ ಗಾಂಧಿಯವರು ಹೈದರಾಬಾದ್ ಗೆ ಭೇಟಿ ನೀಡಿದ್ದಾರೆಂದು ಆರೋಪಿಸಿದ್ದಾರೆ.
Advertisement