ಮೋದಿ ಸರ್ಕಾರದಿಂದ 45 ಸಾವಿರ ಕೋಟಿ ದೂರ ಸಂಪರ್ಕ ಹಗರಣ: ಕಾಂಗ್ರೆಸ್ ಆರೋಪ

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ರಮದಿಂದ ಬೊಕ್ಕಸಕ್ಕೆ 45 ಸಾವಿರ ಕೋಟಿ ನಷ್ಟವಾಗಿದೆ ಎಂದು ಕಾಂಗ್ರೆಸ್ ..
ರಣದೀಪ್‌ ಸುರ್ಜೆವಾಲಾ
ರಣದೀಪ್‌ ಸುರ್ಜೆವಾಲಾ

ನವದೆಹಲಿ: ಯುಪಿಎ ಸರ್ಕಾರದ 2ಜಿ ತರಂಗಗುಚ್ಚ ಹರಾಜು ಹಗರಣ ಜನಮಾನಸದಿಂದ ಇನ್ನೂ ಮರೆಯಾಗಿಲ್ಲ. ಹೀಗಾಗಲೇ ಮೋದಿ ನೇತೃತ್ವದ ಎನ್ ಡಿ ಎ ಸರ್ಕಾರ 45 ಸಾವಿರ ಕೋಟಿ ರು. ದೂರ ಸಂಪರ್ಕ ಹಗರಣ ನಡೆಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಭಾರತಿ ಏರ್‌ಟೆಲ್‌, ವೊಡಾಫೋನ್‌, ರಿಲಯನ್ಸ್‌, ಐಡಿಯಾ, ಟಾಟಾ ಮತ್ತು ಏರ್ಸೆಲ್‌ ಖಾಸಗಿ ಟೆಲಿಕಾಂ ಕಂಪೆನಿಗಳ ಹಿತಾಸಕ್ತಿ ಕಾಪಾಡಲು ಮುಂದಾಗಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕ್ರಮದಿಂದ ಬೊಕ್ಕಸಕ್ಕೆ 45 ಸಾವಿರ ಕೋಟಿ ನಷ್ಟವಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲಾ ದೂರಿದ್ದಾರೆ.

ಸರ್ಕಾರದ ಬೊಕ್ಕಸಕ್ಕೆ ಹಣ ಪಾವತಿಯಾಗದಂತೆ ನೆರವಾಗಿರುವ ಸರ್ಕಾರ, ಈ ಹಗರಣವನ್ನು ಮುಚ್ಚಿಹಾಕಲು ಯತ್ನಿಸಿದೆ ಎಂದು ದೂರಿದೆ. ಸರ್ಕಾರದ ನಡವಳಿಕೆಯಿಂದ ಬೊಕ್ಕಸಕ್ಕೆ ನಷ್ಟವಾಗಿರುವುದು ಮಹಾ ಲೆಕ್ಕಪರಿಶೋಧಕರು ಸಲ್ಲಿಸಿದ ವರದಿಯಿಂದ ತಿಳಿದು ಬಂದಿದೆ. ಕೇವಲ ಲಾಭದಾಯಕ ಬಂಡವಾಳಶಾಹಿಗಳಿಗೆ ನೆರವು ನೀಡಲು ಮುಂದಾಗಿರುವುದು ಈ ಪ್ರಕರಣದಿಂದ ಬೆಳಕಿಗೆ ಬಂದಿದೆ ಎಂದು ಆರೋಪಿಸಿದ್ದಾರೆ.

ಈ ಹಗರಣದಲ್ಲಿ ಭಾರತಿ ಏರ್‌ಟೆಲ್‌, ವೊಡಾಫೋನ್‌, ರಿಲಯನ್ಸ್‌, ಐಡಿಯಾ, ಟಾಟಾ ಮತ್ತು ಏರ್ಸೆಲ್‌ ಕಂಪೆನಿಗಳು ಭಾಗಿಯಾಗಿವೆ. ಆದರೆ, ಪ್ರಧಾನಿ ಅವರ ಒಪ್ಪಿಗೆ ಇಲ್ಲದೆ ಯಾವುದೇ ಕಾರ್ಯಗಳು ನಡೆಯುವುದಿಲ್ಲ. ಹೀಗಾಗಿ, ಈ ಹಗರಣಕ್ಕೆ ಸಂಬಂಧಿಸಿದಂತೆ ಕೇವಲ ಒಬ್ಬ ಸಚಿವರ ಮೇಲೆ ಆರೋಪ ಹೊರಿಸುವುದು ಸರಿ ಅಲ್ಲ ಎಂದರು.ಯುಪಿಎ ಸರ್ಕಾರದ ಸೂಚನೆ ಮೇರೆಗೆ ಮಹಾ ಲೆಕ್ಕಪರಿಶೋಧಕರು 2006–07ರಿಂದ 2009–10ರವರೆಗಿನ ಹಣಕಾಸು ವರ್ಷದ ಲೆಕ್ಕಪತ್ರದ ದಾಖಲೆಗಳನ್ನು ಪರಿಶೀಲಿಸಿದ್ದರು.ಇದೇ ವರ್ಷ ಪರಿಶೀಲನಾ ವರದಿ ಸಲ್ಲಿಸಿದ್ದ ಮಹಾ ಲೆಕ್ಕಪರಿಶೋಧಕರು, ಈ ಆರು ಕಂಪೆನಿಗಳು ನಾಲ್ಕು ವರ್ಷಗಳಲ್ಲಿನ 46,045 ಕೋಟಿ ಆದಾಯದ ಬಗ್ಗೆ ತಪ್ಪು ಮಾಹಿತಿ ನೀಡಿದ್ದನ್ನು ಪತ್ತೆ ಮಾಡಿದ್ದರು. ಅಲ್ಲದೇ  12,488 ಕೋಟಿ ಮೊತ್ತವನ್ನು ವಸೂಲಿ ಮಾಡಲು ಸರ್ಕಾರ ನಿರಾಸಕ್ತಿ ತೋರಿದೆ.

ಪಾರದರ್ಶಕ ಆಡಳಿತದ ಬಗ್ಗೆ ಭರವಸೆ ನೀಡಿ ಅಧಿಕಾರಕ್ಕೇರಿದ ಮೋದಿ ಜನರ ನಂಬಿಕೆ ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com