ನವದೆಹಲಿ: ಕಲ್ಲಿದ್ದಲು ಹಗರಣದಲ್ಲಿ ಸಿಬಿಐ ಮಾಜಿ ಮುಖ್ಯಸ್ಥ ರಂಜಿತ್ ಸಿನ್ಹಾ ಅವರ ಪಾತ್ರವಿದೆ ಎಂದು ಮಂಗಳವಾರ ಸುಪ್ರೀ ಕೋರ್ಟ್ನಿಂದ ನೇಮಕಗೊಂಡ ಸಮಿತಿ ದೋಷಾರೋಪ ಮಾಡಿದೆ.
ಕಲ್ಲಿದ್ದಲು ಹಗರಣದ ತನಿಖೆ ಮೇಲೆ ಅಂದಿನ ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಅವರು ಪ್ರಭಾವ ಬೀರಿರುವುದು ತನಿಖೆಯಿಂದ ಸ್ಪಷ್ಟವಾಗಿದೆ ಎಂದು ಅಟರ್ನಿ ಜನರಲ್ ಮುಕುಲ್ ರೊಹಟ್ಗಿ ಅವರು ಇಂದು ಸುಪ್ರೀಂ ಕೋರ್ಟಿಗೆ ತಿಳಿಸಿದ್ದಾರೆ.
ಸಮಿತಿಯ ಮಧ್ಯಂತರ ವರದಿಯನ್ನು ಕೋರ್ಟ್ ಗೆ ಸಲ್ಲಿಸಿದ ರೊಹಟ್ಗಿ ಅವರು, ಮಾಜಿ ಸಿಬಿಐ ವಿಶೇಷ ನಿರ್ದೇಶಕ ಎಂ.ಎಲ್.ಶರ್ಮಾ ನೇತೃತ್ವದ ಸಮಿತಿಯ ವರದಿಯನ್ನು ಪರಿಶೀಲಿಸಿದ್ದು, ಸಿನ್ಹಾ ಅವರ ಮನೆಯಲ್ಲಿ ಪತ್ತೆಯಾದ ಸಂದರ್ಶಕರ ಡೈರಿ ಪ್ರಾಮಾಣಿಕವಾದದ್ದು ಎಂದು ಹೇಳಿದ್ದಾರೆ.
ಸಿನ್ಹಾ ಅವರು ಹಗರಣದ ಕೆಲವು ಪ್ರಮುಖ ಆರೋಪಿಗಳನ್ನು ದೆಹಲಿಯ ತಮ್ಮ ನಿವಾಸದಲ್ಲಿ ಭೇಟಿ ಆಗಿದ್ದು, ಇದು ಅವರ ಬಗ್ಗೆ ಸಂಶಯಗಳನ್ನು ಹುಟ್ಟುಹಾಕಿದೆ ಎಂದು ವರದಿ ತಿಳಿಸಿದೆ.
ಮಾಜಿ ಸಿಬಿಐ ಅಧಿಕಾರಿ ಎಂ.ಎಲ್. ಶರ್ಮಾ ಸಲ್ಲಿಸಿರುವ ವರದಿ ಬಗ್ಗೆ ತೆಗೆದುಕೊಳ್ಳಬೇಕಾದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.