ನವದೆಹಲಿ: ಪ್ರಸಕ್ತ ಪ್ರಜಾಪ್ರಭುತ್ವಕ್ಕೆ ರಾಜ್ಯಪಾಲರ ಅವಶ್ಯಕತೆ ಇಲ್ಲದೆ ಇರುವುದರಿಂದ ರಾಜ್ಯಪಾಲರ ಹುದ್ದೆಯನ್ನು ತೆಗೆದುಹಾಕಬೇಕು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜು.16 ರಂದು ನಡೆದ ಅಂತರ ರಾಜ್ಯ ಸಮಿತಿ ಸಭೆಯಲ್ಲಿ ನಿತೀಶ್ ಕುಮಾರ್ ರಾಜ್ಯಪಾಲರ ಹುದ್ದೆಯನ್ನು ವಜಾಗೊಳಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ. ಒಂದು ವೇಳೆ ಇದು ಸಾಧ್ಯವಿಲ್ಲ ಎನ್ನುವುದಾದರೆ ರಾಜ್ಯಪಾಲರ ನೇಮಕ ಹಾಗೂ ವಜಾಗೊಳಿಸುವ ಪ್ರಕ್ರಿಯೆಯಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳ ಪಾತ್ರವೂ ಇರುವಂತೆ ಮಾಡಬೇಕು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಈಗಿನ ಪ್ರಜಾಪ್ರಭುತ್ವಕ್ಕೆ ರಾಜ್ಯಪಾಲರ ಅವಶ್ಯಕತೆ ಇಲ್ಲ. ಒಂದು ವೇಳೆ ರಾಜ್ಯಪಾಲರ ಹುದ್ದೆಯನ್ನು ತೆಹೆದು ಹಾಕುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದಾದರೆ, ರಾಜ್ಯಪಾಲರ ನೇಮಕದಲ್ಲಿ ಮುಖ್ಯಮಂತ್ರಿಗಳಿಗೂ ಕೆಲವೊಂದು ಅಧಿಕಾರ ನೀಡಬೇಕು, ಇದಕ್ಕಾಗಿ ಸರ್ಕಾರಿಯಾ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಬೇಕು ಎಂದು ನಿತೀಶ್ ಕುಮಾರ್ ಆಗ್ರಹಿಸಿದ್ದಾರೆ. ರಾಜ್ಯಪಾಲರನ್ನು ನೇಮಕ ಮಾಡುವಾಗ ಅಥವಾ ವಜಾಗೊಳಿಸುವಾಗ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಔಪಚಾರಿಕವಾಗಿ ಸಮಾಲೋಚನೆ ನಡೆಸಬೇಕು, ಅವಶ್ಯಕತೆ ಇದ್ದಲ್ಲಿ ಸಂವಿಧಾನದ 155 ನೇ ವಿಧಿಗೆ ತಿದ್ದುಪಡಿ ತರಬೇಕು ಎಂದು ನಿತೀಶ್ ಕುಮಾರ್ ಸಲಹೆ ನೀಡಿದ್ದಾರೆ.
Advertisement