ನವದೆಹಲಿ: ಸೆಪ್ಟೆಂಬರ್ 30ರೊಳೆಗೆ ನೀವು ಹೊಂದಿರುವ ಕಪ್ಪು ಹಣವನ್ನು ಘೋಷಿಸಿ, ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತೆರಿಗೆ ವಂಚಿಸಿ ಕಪ್ಪು ಹಣ ಹೊಂದಿರುವವರಿಗೆ ಶನಿವಾರ ಎಚ್ಚರಿಕೆ ನೀಡಿದ್ದಾರೆ.
ಆಭರಣ ವ್ಯಾಪಾರಿಗಳು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ನೆಮ್ಮದಿಯಾಗಿ ನಿಂದೆ ಮಾಡಲು ರೀಯಲ್ ಎಸ್ಟೇಟ್ ಮತ್ತು ಜ್ಯುವೆಲ್ಲರಿ ಉದ್ಯಮ ಸೇರಿದಂತೆ ಇತರೆ ಕಡೆ ಇರುವ ರಹಸ್ಯ ಸಂಪತ್ತನ್ನು ಬಹಿರಂಗಪಡಿಸುವಂತೆ ಸೂಚಿಸಿದ್ದಾರೆ.
ತೆರಿಗೆ ವಂಚಿಸಿದ್ದಕ್ಕಾಗಿ ಹಲವು ಜನ ಜೈಲಿಗೆ ಹೋಗಿದ್ದಾರೆ. ಸೆಪ್ಟೆಂಬರ್ 30ರ ನಂತರವೂ ಕಪ್ಪು ಹಣವನ್ನು ಬಹಿರಂಗಪಡಿಸಿ, ಏಕಗವಾಕ್ಷಿ ಮೂಲಕ ತೆರಿಗೆ ಕಟ್ಟಿ ಅದನ್ನು ಸಕ್ರಮ ಮಾಡಿಕೊಳ್ಳದಿದ್ದರೆ ಸರ್ಕಾರ ಅಂತಹದ್ದೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರಧಾನಿ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಆದಾಯ ಘೋಷಣೆ ಯೋಜನೆಯಡಿ ತಮ್ಮ ಕಪ್ಪು ಹಣವನ್ನು ಘೋಷಿಸಿಕೊಳ್ಳಲು ಆದಾಯ ತೆರಿಗೆ ಇಲಾಖೆ ಜೂನ್ 1ರಿಂದ ಸೆಪ್ಟೆಂಬರ್ 30ರವೆರೆಗೆ ಅವಕಾಶ ನೀಡಿದೆ. ಇದಾದ ಬಳಿಕ ಶೇ.45ರಷ್ಟು ತೆರಿಗೆ ಮತ್ತು ದಂಡ ಪಾವತಿಸಬೇಕಾಗುತ್ತೆದೆ.
ಕೇಂದ್ರ ಸರ್ಕಾರವು ಘೋಷಿತ ವಲ್ಲದ ಆದಾಯ ಹೊಂದಿದ ನಾಗರಿಕರಿಗೆ ತೆರಿಗೆ ಕಟ್ಟುವ ಮೂಲಕ ಆದಾಯದ ಸ್ವಯಂ ಘೋಷಣೆಗೆ ಸುವರ್ಣಾವಕಾಶ ಒದಗಿಸಿದೆ. ಈ ಹಿಂದೆ ಯಾವುದೇ ವರ್ಷದಲ್ಲಿ ಆದಾಯ ಹಾಗೂ ಆ ಮೂಲಕ ಗಳಿಸಿದ ಆಸ್ತಿಯನ್ನು ಘೋಷಣೆ ಮಾಡಿಕೊಂಡಿರದಿದ್ದರೇ ಈಗ ತೆರಿಗೆ ಪಾವತಿಸಿ, ಆದಾಯ ಸಕ್ರಮ ಮಾಡಿಕೊಳ್ಳಬಹುದು.