ಇಂಫಾಲ್: ಐರನ್ ಲೇಡಿ ಎಂದೇ ಪ್ರಸಿದ್ದವಾಗಿರುವ ಮಣಿಪುರದ ಮಾನವ ಹಕ್ಕುಗಳ ಹೋರಾಟಗಾರ್ತಿ ಆರೋಮ್ ಶರ್ಮಿಳಾ ತಮ್ಮ 16 ವರ್ಷಗಳ ಉಪವಾಸಕ್ಕೆ ಅಂತ್ಯ ಹಾಡಿದ್ದಾರೆ.
ಸೇನಾಪಡೆಗಳ ದೌರ್ಜನ್ಯದ ವಿರುದ್ಧ ಕಳೆದ 16 ವರ್ಷಗಳಿಂದ ಸುದೀರ್ಘವಾಗಿ ಅಮರಣಾಂತ ಉಪವಾಸ ಸತ್ಯಾಗ್ರಹದ ಹೋರಾಟ ನಡೆಸುತ್ತಿದ್ದ ಮಣಿಪುರದ ಐರೋಮ್ ಶರ್ಮಿಳಾ ಉಪವಾಸ ಸತ್ಯಾಗ್ರಹವನ್ನು ಆಗಸ್ಟ್ 9ರಂದು ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತ ಪಡಿಸಿದ್ದಾರೆ.
ಸರ್ಕಾರ ಯಾವುದೇ ಭರವಸೆಯನ್ನು ನೀಡಿಲ್ಲ, ಹಾಗಾಗಿ ನಾನು ನನ್ನ ಉಪವಾಸ ಸತ್ಯಾಗ್ರಹ ಹೋರಾಟವನ್ನು ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದೇನೆ. ಚುನಾವಣೆಗೆ ಸ್ಪರ್ಧಿಸಿ ಹೋರಾಡುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ವಿಶ್ವಾಸ ಹೊಂದಿರುವುದಾಗಿ ಐರೋಮ್ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ಸುದ್ದಿಸಂಸ್ಥೆ ತಿಳಿಸಿದೆಯ .
ಮಣಿಪುರದಲ್ಲಿ ಮಿಲಿಟರಿ ಯೋಧರಿಗೆ ನೀಡಿರುವ ವಿಶೇಷ ಅಧಿಕಾರವನ್ನು ಹಿಂಪಡೆಯುವಂತೆ ಆಗ್ರಹಿಸಿ 42ವರ್ಷದ ಐರೋಮ್ ಶರ್ಮಿಳಾ 2000 ನವೆಂಬರ್ ನಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಇಂಫಾಲದಲ್ಲಿ ಅಸ್ಸಾಂ ರೈಫಲ್ಸ್ ಗುಂಡು ಹಾರಿಸಿ 10 ಮಣಿಪುರಿಗಳನ್ನು ಕೊಂದಿರುವುದನ್ನು ಪ್ರತಿಭಟಿಸಿ ಐರೋಮ್ ಉಪವಾಸ ಸತ್ಯಾಗ್ರಹ ಹೋರಾಟ ಆರಂಭಿಸಿದ್ದರು.
ಐರೋಮ್ ಶರ್ಮಿಳಾ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ಆರೋಪಿಸಿ ಸೆಕ್ಷನ್ 309ರ ಪ್ರಕಾರ ಹಲವಾರು ಬಾರಿ ಬಂಧಿಸಿ, ಬಿಡುಗಡೆಗೊಳಿಸಲಾಗಿತ್ತು.
Advertisement