ನವದೆಹಲಿ: ನಗರಪಾಲಿಕೆಯ ಸುಲೇಮಾನ್ ಕೊಳೆಗೇರಿ ಧ್ವಂಸ ಕಾರ್ಯಾಚರಣೆಯಿಂದ ವಸತಿ ಕಳೆದುಕೊಂಡಿರುವ ಸುಮಾರು 300 ಮುಸ್ಲಿಂ ಕುಟುಂಬಗಳನ್ನು ತಮ್ಮ ಪ್ರದೇಶಕ್ಕೆ ಸ್ಥಳಾಂತರಿಸಕೂಡದು ಎಂದು ಗುಜರಾತ್ನ ವಡೋದರ ಸಮೀಪದ ಕಪುರಾಯಿ ನಿವಾಸಿಗಳು ಒತ್ತಾಯಿಸಿದ್ದಾರೆ. ಈ ಕುರಿತು ವಡೋದರ ನಗರ ಪಾಲಿಕೆಗೆ ಪತ್ರ ಬರೆದಿದ್ದಾರೆ.
ಮುಸ್ಲಿಮರನ್ನು ತಮ್ಮ ಪ್ರದೇಶಕ್ಕೆ ಸ್ಥಳಾಂತರಿಸಿದಲ್ಲಿ ಇಲ್ಲಿನ ಶಾಂತಿಪ್ರಿಯ ಪರಿಸರ ಹಾಳಾಗುವುದೆಂಬ ಭೀತಿಯನ್ನು ಕಪುರಾಯಿ ಪ್ರದೇಶದ ನಿವಾಸಿಗಳು ಪತ್ರದಲ್ಲಿ ವ್ಯಕ್ತಪಡಿಸಿದ್ದಾರೆ. ಮುಸ್ಲಿಮರ ದೈನಂದಿನ ಚಟುವಟಿಕೆಗಳು ಹಿಂಸೆ, ಹಲ್ಲೆ, ಜಗಳ ಇತ್ಯಾದಿಗಳಿಂದ ಕೂಡಿವೆ ಎಂದವರು ಆಪಾದಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.
ಕಳೆದ ವಾರ ಕೊಳೆಗೇರಿ ಮುಕ್ತ ವಡೋದರ ಅಭಿಯಾನದ ಅಂಗವಾಗಿ ನಗರಪಾಲಿಕೆ ಸುಲೇಮಾನ್ ಚಾಲ್ನ ಸುಮಾರು 300 ಮುಸ್ಲಿಂ ಕುಟುಂಬಗಳ ಗುಡಿಸಲುಗಳನ್ನು ಧ್ವಂಸಗೊಳಿಸಿತ್ತು.
ಕಾರ್ಯಾಚರಣೆಯಿಂದ ಆಕ್ರೋಶಿತರಾಗಿದ್ದ ಮುಸಲ್ಮಾನರು ಪ್ರತಿಭಟನೆಗಿಳಿದು ಪೊಲೀಸ್ ಚೌಕಿ, ಸಿಟಿ ಬಸ್ಸು ಮತ್ತು ದ್ವಿಚಕ್ರ ವಾಹನಗಳನ್ನು ಸುಟ್ಟು ಹಾಕಿದ್ದರು. ಈ ಹಿಂಸೆಯನ್ನು ಹತ್ತಿಕ್ಕಲು ಪೊಲೀಸರು ಬಲಪ್ರಯೋಗ ಮಾಡಿದ್ದರು.
Advertisement