ಸ್ವರ್ಣಮಂದಿರದಲ್ಲಿ ಮುಖ್ಯಮಂತ್ರಿ ಬಾದಲ್ಗೆ ಗೌರವ ಸಲ್ಲಿ ಸಲು ನಿರಾಕರಣೆ; ಅರ್ಚಕ ಎತ್ತಂಗಡಿ
ಅಮೃತಸರ: ಸಿಕ್ಖರ ಪವಿತ್ರ ಸ್ವರ್ಣ ಮಂದಿರ ಅಮೃತಸರದ ಗರ್ಭಗುಡಿಯಲ್ಲಿ ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರಿಗೆ ಸಾಂಪ್ರದಾಯಿಕ ಗೌರವ ಶಿರೋವಸ್ತ್ರ ಸಿರ್ಪೋರಾ ಪ್ರದಾನ ಮಾಡಲು ನಿರಾಕರಿಸಿದ ಪ್ರಾರ್ಥನ ಪಠನಕಾರ (ಅರ್ದಾಸಿಯಾ) ಬಲ್ಬಿರ್ ಸಿಂಗ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಸಿಕ್ಖರ ಪವಿತ್ರ ಧರ್ಮ ಗ್ರಂಥವಾಗಿರುವ ಗುರುಗ್ರಂಥ ಸಾಹಿಬ್ ಅನ್ನು ಕಳೆದ ವರ್ಷ ಅಪವಿತ್ರಗೊಳಿಸಲಾದ ಹಲವಾರು ಪ್ರಕರಣಗಳಲ್ಲಿ ಸರಕಾರ ನಿಷ್ಕ್ರಿಯತೆ ತೋರಿರುವುದಕ್ಕೆ ಪ್ರತಿಭಟನೆಯಾಗಿ ತಾನು ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ಗೆ ಸರ್ಪೋರಾ ಗೌರವ ವಸ್ತ್ರ ನೀಡಲಿಲ್ಲ ಎಂದು ಪ್ರಾರ್ಥನ ಪಠನಕಾರ ಬಲ್ಬಿರ್ ಸಿಂಗ್ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರು ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (ಎಸ್ಜಿಪಿಸಿ)ಯ ಹಿರಿಯ ಅಧಿಕಾರಿಗಳೊಂದಿಗೆ ಸ್ವರ್ಣ ಮಂದಿರಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದರು. ಆಗ ಅವರಿಗೆ ಬಲ್ಬಿರ್ ಸಿಂಗ್ ಸಿರ್ಪೋರಾ ನೀಡಲು ನಿರಾಕರಿಸಿದ್ದರು.
ವಿಶೇಷವೆಂಬಂತೆ ಈ ವರ್ಷ ಜನವರಿ 20ರಂದು ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಅವರಿಗೂ ಇದೇ ಬಲ್ಬಿರ್ ಸಿಂಗ್ ಅವರು ಸಿರ್ಪೋರಾ ನೀಡಲು ನಿರಾಕರಿಸಿದ್ದರು.
ಸ್ವರ್ಣ ಮಂದಿರದಲ್ಲಿ ಅರ್ದಾಸಿಯಾ (ಪ್ರಾರ್ಥನ ಪಠನಕಾರ) ಆಗಿರುವವರು ಎಸ್ಜಿಪಿಸಿಯ ನೌಕರರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ