ರಾಂಚಿ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ(ರಾಷ್ಟ್ರೀಯ ಜನತಾ ದಳ) ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ವೇವು ಹಗರಣ ಕೇಸಿಗೆ ಸಂಬಂಧಪಟ್ಟಂತೆ ಜಾರ್ಖಂಡ್ ನ ರಾಂಚಿಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ.
ಆರ್ ಸಿ38ಎ/1996 ಕೇಸಿಗೆ ಸಂಬಂಧಿಸಿದ್ದಾಗಿದ್ದು, ಇದರಡಿ 49 ಮಂದಿ ಆರೋಪಿಗಳಿದ್ದಾರೆ. ಅವರಲ್ಲಿ ಬಹುಪಾಲು ಜನರು ನ್ಯಾಯಾಲಯಕ್ಕೆ ವೈಯಕ್ತಿಕವಾಗಿ ಹಾಜರಾಗುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ನ್ಯಾಯಾಲಯದ ಮುಂದೆ ಹಾಜರಾಗುವಂತೆ ಸಿಬಿಐ ಆದೇಶಿಸಿತ್ತು ಎಂದು ಲಾಲೂ ಪರ ವಕೀಲ ಪ್ರಭಾತ್ ಕುಮಾರ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಏನಿದು ಮೇವು ಹಗರಣ: ಲಾಲೂ ಪ್ರಸಾದ್ ಯಾದವ್ 1990ರಿಂದ 1997ರವರೆಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಬಿಹಾರದ ಹಲವು ಜಿಲ್ಲೆಗಳ ಪಶುಸಂಗೋಪನಾ ಇಲಾಖೆಯಿಂದ ಸುಮಾರು ಸಾವಿರ ಕೋಟಿ ರೂಪಾಯಿಗಳನ್ನು ಮೋಸದಿಂದ ವಾಪಸ್ಸು ಪಡೆದುಕೊಂಡ ಆರೋಪವಾಗಿದೆ.
2013, ಅಕ್ಟೋಬರ್ 3ರಂದು ಲಾಲೂ ಪ್ರಸಾದ್ ಯಾದವ್ ಅವರಿಗೆ ಮೇವು ಹಗರಣದ ಇನ್ನೊಂದು ಕೇಸಿನಲ್ಲಿ 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿತ್ತು. ಸಂಸದ ಸ್ಥಾನದಿಂದ ಅನರ್ಹಗೊಳಿಸಿತಲ್ಲದೆ 11 ವರ್ಷಗಳವರೆಗೆ ಚುನಾವಣೆಗೆ ನಿಲ್ಲಬಾರದೆಂದು ಕೂಡ ಕೋರ್ಟ್ ಆದೇಶ ನೀಡಿತು. ಲಾಲೂ ಹೊರತಾಗಿ 6 ಮಂದಿ ರಾಜಕೀಯ ನಾಯಕರು ಮತ್ತು ನಾಲ್ವರು ನಿವೃತ್ತ ಐಎಎಸ್ ಅಧಿಕಾರಿಗಳಿಗೂ ನ್ಯಾಯಾಂಗ ಶಿಕ್ಷೆ ವಿಧಿಸಲಾಗಿತ್ತು.
ಈ ನಡುವೆ ಪಾಟ್ನಾದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಂಪನ್ಮೂಲ ಇಲಾಖೆಯಲ್ಲಿ ಮೇವು ಹಗರಣಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳು ಕಣ್ಮರೆಯಾಗಿವೆ.
Advertisement