ನವದೆಹಲಿ: ದೆಹಲಿ ವೈದ್ಯರ ಎಡವಟ್ಟಿನಿಂದಾಗಿ 24 ವರ್ಷದ ಯುವಕ ಸಂಕಷ್ಟಕ್ಕೆ ಸಿಲುಕಿ ನರಳುತ್ತಿದ್ದಾನೆ. ಬಲಗಾಲಿನ ಬದಲು ಎಡಗಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿ ತಮ್ಮ ನಿರ್ಲಕ್ಷ್ಯತನದ ಪರಮಾವದಿ ಮೆರೆದಿದ್ದಾರೆ.
ರವಿ ರಾಯ್ ಮನೆಯಲ್ಲಿ ಮೆಟ್ಟಿಲು ಇಳಿಯುತ್ತಿದ್ದ ವೇಳೆ ಬಿದ್ದು ಬಲಗಾಲಿಗೆ ಗಾಯ ಮಾಡಿಕೊಂಡಿದ್ದಾನೆ. ತಕ್ಷಣವೇ ದೆಹಲಿಯ ಶಾಮಿಲಾರ್ ಬಾಗ್ ನಲ್ಲಿರುವ ಪ್ರತಿಷ್ಠಿತ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಂತರ ರವಿರಾಯ್ ಗೆ ಸಿಟಿ ಸ್ಕ್ಯಾನ್ ಮತ್ತು ಎಕ್ಸ್ ರೇ ತೆಗೆದು ನೋಡಿದಾಗ ಆತನ ಕಾಲು ಮುರಿದಿದೆ ಎಂದು ರಿಫೋರ್ಟ್ ಬಂದಿದೆ. ಇದರಿಂದ ತಕ್ಷಣವೇ ಆತನ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ವೈದ್ಯರ ಸಲಹೆಗೆ ಅನುಸಾರವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ತಾನು ಸಿದ್ಧನಾಗಿರುವುದಾಗಿ ತಿಳಿಸಿದ್ದಾನೆ. ಶಸ್ತ್ರ ಚಿಕಿತ್ಸೆ ಮಾಡಲು ಮುಂದಾದ ವೈದ್ಯರು ಮುರಿದ ಬಲಗಾಲಿನ ಬದಲಿಗೆ ಸರಿಯಾಗಿದ್ದ ಎಡಗಾಲಿಗೆ ಶಸ್ತ್ರಚಿಕಿತ್ಸೆ ಮಾಡಿ, ರಾಡ್ ಫಿಕ್ಸ್ ಮಾಡಿದ್ದಾರೆ.
ನಂತರ ರವಿಗೆ ಪ್ರಜ್ಞೆ ಬಂದಾಗ ರವಿಗೆ ಶಾಕ್ ಆಗಿದೆ. ವೈದ್ಯರು ಎಡವಟ್ಟು ಮಾಡಿರುವ ಕುರಿತು ಪೋಷಕರಿಗೆ ತಿಳಿಸಿದ್ದಾನೆ. ನಂತರ ರವಿಯನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣ ದಾಖಲಿಸಿದ್ದು, ವೈದ್ಯರ ವಿಚಾರಣೆ ನಡೆಸಲಾಗುತ್ತಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಫೋರ್ಟಿಸ್ ಆಸ್ಪತ್ರೆ ವೈದ್ಯರ ವಿರುದ್ಧ ತನಿಖೆ ನಡೆಸುತ್ತಿದೆ. ಜತೆಗೆ ಅಗತ್ಯ ಬಿದ್ದರೆ ಆತನಿಗೆ ಸಂಪೂರ್ಣ ಚಿಕಿತ್ಸೆ ಉಚಿತವಾಗಿ ಮಾಡುವುದಾಗಿ ತಿಳಿಸಿದೆ.
Advertisement