ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸರಿಗೆ ಸಂಬಂಧಿಸಿದ ಮತ್ತಷ್ಟು ಕಡತಗಳನ್ನು ಕೇಂದ್ರ ಸರ್ಕಾರ ಬಹಿರಂಗಗೊಳಿಸಿದ್ದು, ನೆಹರು ಅವಧಿಯಲ್ಲಿ ಸುಭಾಷ್ ಚಂದ್ರ ಬೋಸರಿಗೆ ಸಂಬಂಧಿಸಿದ ಮಹತ್ವದ ಕಡತಗಳನ್ನು ನಾಶ ಮಾಡಲಾಗಿತ್ತು ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿದೆ.
ಸುಭಾಷ್ ಚಂದ್ರ ಬೋಸರು ಸಂಘಟಿಸಿದ್ದ ಇಂಡಿಯನ್ ನ್ಯಾಷನಲ್ ಆರ್ಮಿ(ಎನ್ಐಎ) ಗೆ ಸೇರಿದ್ದ ಸ್ವತ್ತುಗಳ ವಿಲೇವಾರಿಗೆ ಸಂಬಂಧಿಸಿದ ಕಡತ ಸಂಖ್ಯೆ 23 (156)/51 -ಪಿಎಂ ಪ್ರಕಾರ, ನೇತಾಜಿಗೆ ಸಂಬಂಧಿಸಿದ 1-A, 2-A, 3-A, 4-A, 6-A ಹಾಗೂ 8-A ಪತ್ರಗಳು ನೆಹರು ಪ್ರಧಾನಿಯಾಗಿದ್ದ ಅವಧಿಯಲ್ಲಿ ನಾಶವಾಗಿದೆ ಎಂದು ತಿಳಿದುಬಂದಿದೆ.
ಇನ್ನು ಸುಭಾಷ್ ಚಂದ್ರ ಬೋಸರಿಗೆ ಸಂಬಂಧಿಸಿದಂತೆ 1953 ರ ಆಗಸ್ಟ್ 24 ರಂದು ಹಾಗೂ ಆಗಸ್ಟ್ 27 ರಂದು ಪ್ರಧಾನಿ ಕಾರ್ಯಾಲಯದಿಂದ ವಿದೇಶಾಂಗ ಇಲಾಖೆ ಅಧಿಕಾರಿ ಮೊಹಮ್ಮದ್ ಯೂನಸ್ ಗೆ ಬರೆಯಲಾಗಿದ್ದ ಪಾತ್ರಗಳನ್ನು ನಾಶ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಕಡತಗಳು ಹೇಳುತ್ತಿವೆ. ಇಷ್ಟೇ ಅಲ್ಲದೆ ವಿದೇಶಾಂಗ ಇಲಾಖೆ ಅಧಿಕಾರಿಯಾಗಿದ್ದ ಮೊಹಮ್ಮದ್ ಯೂನಸ್ ಪ್ರಧಾನಿ ಕಾರ್ಯಾಲಯಕ್ಕೆ ಕಲಿಸಿಕೊಟ್ಟಿದ್ದ ಮೆಮೋ ಸಂಖ್ಯೆ 2/53/19713/601 (151), ಅಖಿಲ ಭಾರತ ಐಎನ್ಎ ವಿಚಾರಣೆ ಹಾಗೂ ಪರಿಹಾರ ಸಮಿತಿಯ ಜಂಟಿ ಕಾರ್ಯದರ್ಶಿ ರಾಷ್ಟ್ರಪತಿಗಳಿಗೆ ಬರೆದಿದ್ದ ಪತ್ರ ಸಹ ನಾಶವಾದ ಕಡತ/ ಪತ್ರಗಳಲ್ಲಿ ಸೇರಿದ್ದರೆ 1953 ರ ನವೆಂಬರ್ 17 ರಂದು ನೆಹರು ಮೊಹಮ್ಮದ್ ಯೂನಸ್ ಗೆ ಬರೆದಿದ್ದ ಒಂದೇ ಒಂದು ಪತ್ರ ಮಾತ್ರ ಲಭ್ಯವಿದೆ ಎಂದು ತಿಳಿದುಬಂದಿದೆ. ನಿರ್ದಿಷ್ಟ ಸೂಚನೆ ಮೇರೆಗೆ ಪತ್ರಗಳನ್ನು ನಾಶ ಮಾಡಲಾಗಿದೆಯೇ ಅಥವಾ ಕಡತ/ ಪತ್ರಗಳು ನಾಶವಾಗಿರುವ ಕಾರಣವನ್ನು ಕೇಂದ್ರ ಸರ್ಕಾರ ಈ ವರೆಗೂ ಬಹಿರಂಗಗೊಳಿಸಿಲ್ಲ.
Advertisement