ನವದೆಹಲಿ: ಸಂಸತ್ ನಲ್ಲಿ ಎಡಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಜೆ ಎನ್ ಯು ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್ ಗೆ ರಾಜಕೀಯದಿಂದ ದೂರವಿದ್ದು ಶಿಕ್ಷಣದತ್ತ ಗಮನ ಕೇಂದ್ರೀಕರಿಸಲು ಸಲಹೆ ನೀಡಿದ್ದಾರೆ.
ಕನ್ಹಯ್ಯ ಕುಮಾರ್ ವಿವಾದದಿಂದ ಉಂಟಾಗಿರುವ ಜನಪ್ರಿಯತೆಗೆ ಹೆಚ್ಚು ಗಮನ ಕೊಡದೇ ಫೆ.9 ರಂದು ನಡೆದಂತಹ ಘಟನೆಗಳು ಪುನಾರಾವರ್ತನೆಯಾಗದಂತೆ ಎಚ್ಚರ ವಹಿಸಲಿ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ. ಜೆಎನ್ ಯು ವಿದ್ಯಾರ್ಥಿಗಳು ರಾಜಕೀಯದಿಂದ ದೂರ ಉಳಿಯಬೇಕು, ಒಂದು ವೇಳೆ ರಾಜಕೀಯದಲ್ಲಿ ತೀವ್ರವಾದ ಆಸಕ್ತಿಯುಳ್ಳವರಾದರೆ, ಶಿಕ್ಷಣ ಮೊಟಕುಗೊಳಿಸಿ ರಾಜಕೀಯ ಪಕ್ಷ ಸೇರಲಿ, ಕನ್ಹಯ್ಯ ಕುಮಾರ್ ನ ನೆಚ್ಚಿನ ಪಕ್ಷ ಸಂಸತ್ ನಲ್ಲಿ ಒಂದು ಅಂಕಿಯ ಸದಸ್ಯರ ಬಲ ಹೊಂದಿದೆ. ರಾಜಕೀಯ ಆಸಕ್ತಿಯನ್ನು ಇಟ್ಟುಕೊಂಡು, ಅಫ್ಜಲ್ ಗುರು, ಯಾಕೂಬ್ ಮೆಮನ್, ಮುಕ್ಬೂಲ್ ಭಟ್ ನಂತಹವರನ್ನು ಬೆಂಬಲಿಸಿ ವಿದ್ಯಾರ್ಥಿಗಳನ್ನು ಸೆಳೆಯುವ ಅಗತ್ಯವಿಲ್ಲ ಎಂದು ಎಡಪಕ್ಷಗಳ ವಿರುದ್ಧ ವೆಂಕಯ್ಯ ನಾಯ್ಡು ವಾಗ್ದಾಳಿ ನಡೆಸಿದ್ದಾರೆ. ಜೆಎನ್ ಯು ನಲ್ಲಿ ರಾಷ್ಟ್ರವಿರೋಧಿ ಘೋಷಣೆ ಕೇಳಿಬಂದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿ ಸಂಘಟನೆ ಮುಖಂಡ ಕನ್ಹಯ್ಯ ಕುಮಾರ್ ನನ್ನು ಪೊಲೀಸರು ಬಂಧಿಸಿ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಿದ್ದರು. ಕನ್ಹಯ್ಯ ಕುಮಾರ್ ಮಾ.3 ರಂದು ಜಾಮೀನು ಪಡೆದು ಹೊರಬಂದಿದ್ದರು.
Advertisement