ವೈದ್ಯರಿಗೆ ಅಪಘಾತ ಮಾಡಿದ ಕಾರು ಸ್ಮೃತಿ ಇರಾನಿಯವರದ್ದಲ್ಲ; ಸಚಿವಾಲಯ ಸ್ಪಷ್ಟನೆ

ಅಪಘಾತಕ್ಕೊಳಗಾಗಿ ರಸ್ತೆಯಲ್ಲಿ ಬಿದ್ದಿದ್ದವರಿಗೆ ಸಹಾಯ ಮಾಡದೆ ತೆರಳಿದ್ದರು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಮಾಡಲಾಗಿರುವ ಆರೋಪವನ್ನು...
ಸ್ಮೃತಿ ಇರಾನಿ(ಸಂಗ್ರಹ ಚಿತ್ರ)
ಸ್ಮೃತಿ ಇರಾನಿ(ಸಂಗ್ರಹ ಚಿತ್ರ)

ನವದೆಹಲಿ: ಅಪಘಾತಕ್ಕೊಳಗಾಗಿ ರಸ್ತೆಯಲ್ಲಿ ಬಿದ್ದಿದ್ದವರಿಗೆ ಸಹಾಯ ಮಾಡದೆ ತೆರಳಿದ್ದರು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಮಾಡಲಾಗಿರುವ ಆರೋಪವನ್ನು ಅವರ ಸಚಿವಾಲಯ ತಳ್ಳಿಹಾಕಿದೆ. ಅಲ್ಲದೆ ಅಪಘಾತಕ್ಕೆ ಕಾರಣವಾದ ಹೋಂಡಾ ಸಿಟಿ ಕಾರು ತನ್ನ ಬೆಂಗಾವಲು ಕಾರು ಆಗಿತ್ತು ಎಂಬ ಆಪಾದನೆಯನ್ನು ಕೂಡ ನಿರಾಕರಿಸಿದೆ.

ಅಪಘಾತಗೊಳಿಸಿದ ಕಾರು ಸಚಿವೆಯವರು ಕುಳಿತ ಕಾರು ಆಗಿರಲಿಲ್ಲ. ಅವರು ಸ್ಥಳಕ್ಕೆ ತಲುಪುವ ಎಷ್ಟೋ ಹೊತ್ತಿಗೆ ಮೊದಲು ಅಪಘಾತ ಸಂಭವಿಸಿತ್ತು ಎನ್ನುತ್ತದೆ ಮಾನವ ಸಂಪನ್ಮೂಲ ಸಚಿವಾಲಯ.

ಸಚಿವೆ ಸ್ಮೃತಿ ಇರಾನಿಯವರು ಮೊನ್ನೆ ಶನಿವಾರ ಗುಜರಾತ್ ನ ಮಥುರಾದಲ್ಲಿ ಬಿಜೆಪಿ ಯುವ ಸಮ್ಮೇಳನದಲ್ಲಿ ಭಾಗವಹಿಸಿ ದೆಹಲಿಗೆ ವಾಪಾಸಾಗುತ್ತಿದ್ದರು. ನೋಯ್ಡಾ ಹೆದ್ದಾರಿಯಲ್ಲಿ ಅವರ ಕಾರು ಬೈಕಿಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿತ್ತು. ಅದರಲ್ಲಿ ಆಗ್ರಾ ಮೂಲದ ವೈದ್ಯ ರಮೇಶ್ ಅವರು ಸಾವನ್ನಪ್ಪಿದ್ದರು. ಅವರ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ತಾವು ಸಹಾಯಕ್ಕೆ ಕೋರಿದರೂ ಸಚಿವೆ ಸಹಾಯಕ್ಕೆ ಬರಲಿಲ್ಲ ಎಂದು ವೈದ್ಯರ ಮಕ್ಕಳು ಆರೋಪಿಸಿದ್ದಾರೆ ಮತ್ತು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.

ಆದರೆ ಸ್ಮೃತಿ ಇರಾನಿಯವರ ವಕ್ತಾರರು ಆರೋಪವನ್ನು ಖಡಾಖಂಡಿತವಾಗಿ ಅಲ್ಲಗಳೆದಿದ್ದಾರೆ. ಎಫ್ ಐಆರ್ ನಲ್ಲಿ ಉಲ್ಲೇಖಿಸಿದ ಕಾರು ಸಂಖ್ಯೆ 5315 ಸಚಿವೆಯ ಬೆಂಗಾವಲು ವಾಹನವಾಗಿರಲಿಲ್ಲ. ಅಪಘಾತವಾದ ಕೂಡಲೇ ಸಚಿವೆ ಹಿರಿಯ ಪೊಲೀಸ್ ಅಧಿಕಾರಿಗೆ ಕರೆ ಮಾಡಿ ಆಂಬ್ಯುಲೆನ್ಸ್ ಕಳುಹಿಸುವಂತೆ ಸೂಚಿಸಿದರು.

ಸಚಿವೆಯವರ ಕಾರು ನಮ್ಮ ಬೈಕಿಗೆ ಡಿಕ್ಕಿ ಹೊಡೆಯಿತು. ನಾವು ಕೆಳಗೆ ಬಿದ್ದೆವು. ನಾವು ತುರ್ತು ಸಹಾಯ ಕೋರಿದರೂ ಅವರು ಸಹಾಯಕ್ಕೆ ಬರಲಿಲ್ಲ. ತಕ್ಷಣವೇ ವೈದ್ಯಕೀಯ ಸೇವೆ ಒದಗಿಸುತ್ತಿದ್ದರೆ ನಮ್ಮ ತಂದೆ ಬದುಕುಳಿಯುತ್ತಿದ್ದರೇನೋ? ಎನ್ನುತ್ತಾರೆ ವೈದ್ಯ ರಮೇಶ್ ನಗರ್ ಅವರ ಪುತ್ರಿ ಸಾಂದಿಲಿ.

ಸ್ಮೃತಿ ಇರಾನಿಯವರು ಅಪಘಾತವಾದ ನಂತರ ಕೆಳಗಿಳಿದು ಬೇರೊಂದು ಕಾರಿನಲ್ಲಿ ಹೊರಟು ಹೋದರು ಎಂದು ಆರೋಪಿಸುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com