ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರಗಾಮಿಗಳ ದಾಳಿ ನಂತರ ಪಂಜಾಬ್ ನಲ್ಲಿ ಅರೆಸೇನಾ ಪಡೆ ನಿಯೋಜನೆಗೆ ಕೇಂದ್ರ ಸರ್ಕಾರ ಪಂಜಾಬ್ ಸರ್ಕಾರದ ಬಳಿ 6 ಕೋಟಿ 35 ಲಕ್ಷ ರೂಪಾಯಿ ಕೇಳಿದೆ ಎಂಬ ವರದಿಗಳ ಮಧ್ಯೆ, ಈ ಮೊತ್ತವನ್ನು ತಮ್ಮ ಸಂಸದರ ನಿಧಿಯಿಂದ ಕಡಿತಗೊಳಿಸುವಂತೆ ಆಪ್ ಪಕ್ಷದ ಸಂಸದರಾದ ಭಗವಂತ್ ಮನ್ ಮತ್ತು ಸಾಧು ಸಿಂಗ್ ಕೋರಿದ್ದಾರೆ.
ಈ ಕುರಿತು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಅವರು, ಪಂಜಾಬ್ ಸರ್ಕಾರ ಈಗಾಗಲೇ 1.5 ಲಕ್ಷ ಕೋಟಿ ಸಾಲದ ಹೊರೆಯಲ್ಲಿದೆ. ಹಾಗಾಗಿ ಧನ ಸಹಾಯ ಮಾಡಬೇಕು. ದೇಶದ ಸ್ವಾತಂತ್ರ್ಯದಲ್ಲಿ ಪಂಜಾಬ್ ರಾಜ್ಯದ ಕೊಡುಗೆ ಸಾಕಷ್ಟಿದೆ. ಆದರೂ ಕೂಡ ಈ ವರ್ಷ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಂಜಾಬ್ ರಾಜ್ಯದ ಸೇನಾ ಯೋಧರಿಗೆ ಅವಕಾಶ ನೀಡಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
''ನೀವು ಪಂಜಾಬ್ ನ್ನು ಭಾರತದ ಒಂದು ಭಾಗ ಎಂದು ಪರಿಗಣಿಸದಿದ್ದರೆ ಅಥವಾ ಪಠಾಣ್ ಕೋಟ್ ದಾಳಿಯನ್ನು ದೇಶದ ಮೇಲೆ ಉಗ್ರರು ನಡೆಸಿದ ದಾಳಿ ಎಂದು ಭಾವಿಸದಿದ್ದರೆ, ಆ ರಾಜ್ಯದ ಸಂಸದರಾದ ನಾವು ಸಂಸದರ ನಿಧಿಯಿಂದ ಮೊತ್ತವನ್ನು ಕಡಿತಗೊಳಿಸಿ ಎಂದು ಕೇಳುತ್ತೇವೆ ಎಂದಿದ್ದಾರೆ.
ಪಂಜಾಬ್ ಸರ್ಕಾರ ಆರೂವರೆ ಕೋಟಿ ರೂಪಾಯಿಯನ್ನು ನೀಡಲು ನಿರಾಕರಿಸಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಉತ್ತರಿಸಿರುವ ಪಂಜಾಬ್ ಸರ್ಕಾರ, ಅರೆಸೇನಾ ಪಡೆ ನಿಯೋಜಿಸುವುದು ದೇಶದ ಹಿತಾಸಕ್ತಿಯಿಂದ. ಅದರ ಖರ್ಚುವೆಚ್ಚವನ್ನು ರಾಜ್ಯ ಸರ್ಕಾರದ ಮೇಲೆ ಹೊರಿಸಬಾರದು ಎಂದು ಹೇಳಿದೆ.
ಎನ್ ಡಿಎ ಸರ್ಕಾರದ ಮೈತ್ರಿ ಪಕ್ಷಗಳಾದ ಶಿರೋಮಣಿ ಅಕಾಲಿ ದಳ ಮತ್ತು ಬಿಜೆಪಿ ಪಂಜಾಬ್ ನಲ್ಲಿ ಅಧಿಕಾರದಲ್ಲಿದೆ.
Advertisement