ಮುಂಬೈ: ಕಿಂಗ್ ಫಿಷರ್ ಏರ್ ಲೈನ್ಸ್ ವಿರುದ್ಧ ದೂರು ದಾಖಲಿಸಿರುವ ಸೇವಾ ತೆರಿಗೆ ಇಲಾಖೆಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ.
ಕಿಂಗ್ ಫಿಷರ್ ಏರ್ ಲೈನ್ಸ್ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಕೊಡಿಸುವಂತೆ ಕೋರಿ ಸೇವಾ ತೆರಿಗೆ ಇಲಾಖೆ ಬಾಂಬೆ ಹೈಕೋರ್ಟ್ ನಲ್ಲಿ ದೂರು ದಾಖಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಬಾಕಿ ವಸೂಲಾತಿಯಲ್ಲಿ ವಿಫಲವಾಗಿರುವುದಕ್ಕೆ ಸೇವಾ ತೆರಿಗೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿದೆ.
ನ್ಯಾಯಮೂರ್ತಿ ಸಿ.ವಿ ಬದಂಗ್ ಅವರು, ಸೇವಾ ತೆರಿಗೆ ಬಾಕಿ ವಸೂಲಾತಿಯಲ್ಲಿ ನಿರ್ಲಕ್ಷ್ಯತನವಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಹೈಕೋರ್ಟ್ ನ ಎರಡು ನೋಟಿಸ್ ಜಾರಿಗೊಳಿಸುವಲ್ಲಿ ಸೇವಾ ತೆರಿಗೆ ಇಲಾಖೆ ವಿಫಲವಾಗಿದೆ ಎಂದು ನ್ಯಾಯಾಪೀಠ ತಿಳಿಸಿದೆ.
ಸೂಕ್ತ ಸಮಯದಲ್ಲಿ ನೋಟೀಸ್ ಜಾರಿಗೊಳಿಸದೇ, ನಿರ್ಲಕ್ಷ್ಯ ತೋರಲಾಗಿದೆ. 2015ರ ಸೆಪ್ಟೆಂಬರ್ ಮತ್ತು ಡಿಸೆಂಬರ್ ನಲ್ಲಿ ನೋಟೀಸ್ ಜಾರಿ ಮಾಡಲಾಗಿತ್ತು. ಆದರೆ, ಇದನ್ನು ಮಲ್ಯರಿಗೆ ನೀಡಲು ಸೇವಾ ತೆರಿಗೆ ವಿಫಲವಾಗಿದೆ ಎಂದು ನ್ಯಾಯಾಪೀಠ ಹೇಳಿದೆ.
ತೆರಿಗೆ ಬಾಕಿ ವಸೂಲಾತಿ ಮಾಡಬೇಕೆಂದಿದ್ದರೇ, ಇಷ್ಟು ದಿನ ಕಾಯಬೇಕಿರಲಿಲ್ಲ ಎಂದು ನ್ಯಾಯಾಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
ಕಿಂಗ್ಫಿಷರ್ ಏರ್ಲೈನ್ಸ್ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಕೊಡಿಸುವಂತೆ ಹಾಗೂ ಸಂಸ್ಥೆಯ ಮಾಲೀಕ ಮಲ್ಯ ಅವರ ಪಾಸ್ಪೋರ್ಟ್ ವಶಕ್ಕೆ ಪಡೆದುಕೊಳ್ಳಬೇಕು ಎಂದು ಸೇವಾ ತೆರಿಗೆ ಇಲಾಖೆ ಹೈಕೋರ್ಟ್ ನಲ್ಲಿ ಮನವಿ ಮಾಡಿತ್ತು.