ಭುವನೇಶ್ವರ್: ಇತಿಹಾಸ ಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ದುರಸ್ತಿ ಕಾರ್ಯಕ್ಕೆ ತಾಂತ್ರಿಕ ತಜ್ಞರನ್ನು ಕಳಿಸಲು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಕೇಂದ್ರ ಸಂಸ್ಕೃತಿ ಇಲಾಖೆ ಸಚಿವ ಮಹೇಶ್ ಶರ್ಮಾ ಅವರಿಗೆ ಪತ್ರ ಬರೆದಿರುವ ನವೀನ್ ಪಟ್ನಾಯಕ್, ಜಗನ್ನಾಥ ದೇವಾಲಯದಲ್ಲಿ ಬಿರುಕು ಕಾಣಿಸಿಕೊಂಡಿರುವುದು ತುರ್ತಾಗಿ ಗಮನಹರಿಸಬೇಕಾದ ವಿಷಯವಾಗಿರುವುದರಿಂದ ದುರಸ್ತಿ ಕಾರ್ಯಕ್ಕೆ ತಾಂತ್ರಿಕ ತಜ್ಞರನ್ನು ಕಳಿಸಲು ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಬೇಕೆಂದು ನವೀನ್ ಪಟ್ನಾಯಕ್ ಒತ್ತಾಯಿಸಿದ್ದಾರೆ.
ಪುರಿ ಜಗನ್ನಾಥ ದೇವಾಲಯ ಒಡಿಶಾದ ಅತ್ಯಂತ ಪವಿತ್ರ ಮಂದಿರವಾಗಿದ್ದು ಭಾರತದಲ್ಲಿ ವಿಶೇಷ ಮಹತ್ವ ಹೊಂದಿದೆ. "ದೇವಾಲಯದ 4 ಪ್ರಧಾನ ಕಂಬಗಳು ಹಾಗೂ ಕಲ್ಲಿನಿಂದ ನಿರ್ಮಿಸಲಾಗಿರುವ 8 ತೊಲೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ದೇವಾಲಯದ ರಚನೆಯ ಮೇಲೆ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ.
ಪರಿಹಾರ ಕ್ರಮಗಳನ್ನು ಸೂಚಿಸಲು ರಾಜ್ಯ ಸರ್ಕಾರ ಭಾರತೀಯ ಪುರಾತತ್ವ ಇಲಾಖೆಯ ಸದಸ್ಯರು ಹಾಗೂ ಇಂಜಿನಿಯರ್ ಗಳನ್ನೊಳಗೊಂಡ ತಂಡವೊಂಡನ್ನು ರಚನೆ ಮಾಡಿದೆ ಎಂದು ನವೀನ್ ಪಟ್ನಾಯಕ್ ತಿಳಿಸಿದ್ದಾರೆ.
Advertisement